ಧಗಧಗನೆ ಹೊತ್ತಿ ಉರಿದ ಆಯಿಲ್ ಮಳಿಗೆ- 60 ಲಕ್ಷ ರೂ. ಸಾಮಾಗ್ರಿಗಳು ಬೆಂಕಿಗಾಹುತಿ

ರಾಮನಗರ: ಆಯಿಲ್ ಮಳಿಗೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‍ನಿಂದ ಉಂಟಾದ ಬೆಂಕಿಗೆ ಸಂಪೂರ್ಣವಾಗಿ ಮಳಿಗೆಯೇ ಹೊತ್ತಿ ಉರಿದ ಘಟನೆ ರಾಮನಗರದ ಕೆಂಪೇಗೌಡ ಸರ್ಕಲ್‍ನಲ್ಲಿ ತಡರಾತ್ರಿ ನಡೆದಿದೆ.

ರಾಮನಗರದ ನಿವಾಸಿಯಾಗಿರುವ ಮೂರ್ತಿ ಅವರಿಗೆ ಸೇರಿದ ಸರ್ವೋ ಆಯಿಲ್ ಕಂಪನಿಯ ಮಳಿಗೆ ಬೆಂಕಿಗಾಹುತಿಯಾಗಿದೆ. ರಾತ್ರಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‍ ಉಂಟಾಗಿದ್ದು ಬಾಗಿಲು ಬಂದ್ ಮಾಡಿದ್ದ ಕಾರಣ ಒಳಗಿದ್ದ ಆಯಿಲ್ ಸಹಿತ ಸಂಪೂರ್ಣವಾಗಿ ಬೆಂಕಿ ಆವರಿಸಿದೆ. ನಂತರ ಬೆಂಕಿ ಹೊರಭಾಗದಲ್ಲಿ ಕಾಣಿಸಿಕೊಂಡಿದ್ದು, ಹೊಗೆಯನ್ನು ಕಂಡು ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 30ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಬೆಂಕಿಗಾಹುತಿ

ತಕ್ಷಣ ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಕಿಯಲ್ಲಿ ಅಂದಾಜು 60 ಲಕ್ಷ ರೂ. ಮೌಲ್ಯದ ಆಯಿಲ್ ಸಾಮಾಗ್ರಿಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿದೆ.

ಸದ್ಯ ರಾಮನಗರ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *