ಮಂಡ್ಯ: ತೆಂಗಿನಕಾಯಿ ನಾರು ಹೊತ್ತೊಯ್ತಿದ್ದ ತಮಿಳುನಾಡು ಲಾರಿಯಲ್ಲಿ ಬೆಂಕಿ- ಗ್ರಾಮಸ್ಥರ ನೆರವಿನಿಂದ ತಪ್ಪಿದ ದುರಂತ

ಮಂಡ್ಯ: ತೆಂಗಿನಕಾಯಿ ಸಿಪ್ಪೆಯ ನಾರನ್ನು ತುಂಬಿಕೊಂಡು ಹೋಗುತ್ತಿದ್ದ ತಮಿಳುನಾಡು ಮೂಲದ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮರಳೇಗಾಲ ಗ್ರಾಮದ ಬಳಿ ನಡೆದಿದೆ.

ಟಿಎನ್34, ಎಸ್ 3818 ನಂಬರಿನ ಲಾರಿಯಲ್ಲಿ ತಮಿಳುನಾಡಿಗೆ ತೆಂಗಿನಕಾಯಿ ಸಿಪ್ಪೆಯ ನಾರನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ತೆಂಗಿನ ನಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಬೆಂಕಿಯ ಬಗ್ಗೆ ಚಾಲಕನ ಗಮನಕ್ಕೆ ತಂದಿದ್ದಾರೆ.

ತಕ್ಷಣ ಲಾರಿ ನಿಲ್ಲಿಸಿದ ಚಾಲಕ ಸ್ಥಳೀಯರ ಸಹಾಯದಿಂದ ಅಗ್ನಿ ಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸಕಾಲಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments

Leave a Reply

Your email address will not be published. Required fields are marked *