ಮಧ್ಯರಾತ್ರಿ ನಡುರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಖಾಸಗಿ ಬಸ್

ಮಂಡ್ಯ: ಖಾಸಗಿ ಕಂಪೆನಿಗೆ ಸೇರಿದ ಬಸ್ ಚಲಿಸುತ್ತಿರುವಾಗಲೇ ರಾತ್ರೋರಾತ್ರಿ ಧಗಧಗನೆ ಹೊತ್ತಿ ಉರಿದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

ಜಿಲ್ಲೆಯ ಮದ್ದೂರು ಸಮೀಪ ಕೊಲ್ಲಿ ವೃತ್ತದ ಬಳಿ ಬಸ್ ಹೊತ್ತಿ ಉರಿದಿದೆ. ಖಾಸಗಿ ಕಂಪೆನಿಗೆ ಸೇರಿದ ಬಸ್ ಸುಮಾರು 35 ಮಂದಿ ಸಿಬ್ಬಂದಿಯನ್ನು ಕರೆದುಕೊಂಡು ಬಿಡದಿಯಿಂದ ಮಂಡ್ಯದ ಕಡೆಗೆ ಬರುತ್ತಿತ್ತು ಎನ್ನಲಾಗಿದೆ.

ಅಂತೆಯೇ ಮಧ್ಯರಾತ್ರಿ 1 ಗಂಟೆ 30 ನಿಮಿಷದ ಸುಮಾರಿಗೆ ಕೊಲ್ಲಿ ವೃತ್ತದ ಬಳಿ ಬಸ್ ತಲುಪಿದಾಗ ಬಸ್ ನ ಪ್ರಯಾಣಿಕರಿಗೆ ಮತ್ತು ಡ್ರೈವರ್ ಗೆ ಬಸ್ ನಲ್ಲಿ ಏನೋ ಬದಲಾವಣೆ ಆಗುತ್ತಿರುವ ಅನುಮಾನ ಮೂಡಿದೆ. ತಕ್ಷಣ ಬಸ್ ನಿಲ್ಲಿಸಿ ಪರೀಕ್ಷಿಸಿದಾಗ ಬಸ್ ನ ಎಂಜಿನಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಬಸ್ ಪೂರ್ತಿ ಹರಡುತ್ತಿರುವುದು ಕಂಡು ಬಂದಿದೆ. ಇದ್ರಿಂದ ಭಯಭೀತರಾಗಿ ತಕ್ಷಣ ಬಸ್ ನೊಳಗಿದ್ದ ಪ್ರಯಾಣಿಕರು ಕೆಳಗೆ ಇಳಿದಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿ ಬಸ್ ಧಗಧಗನೆ ಹೆದ್ದಾರಿಯಲ್ಲೇ ಹೊತ್ತಿ ಉರಿದಿದೆ.

ಪರಿಣಾಮ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಬಸ್ ಸಂಪೂರ್ಣ ಭಸ್ಮವಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *