ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‍ಐಆರ್ ದಾಖಲು

ಮೈಸೂರು: ರಾಜಕೀಯ ಜಂಜಾಟದಿಂದ ಸ್ವಲ್ಪಕಾಲ ದೂರ ಉಳಿದು ಆರೋಗ್ಯ ಸುಧಾರಿಸಿಕೊಳ್ಳಲು ಧರ್ಮಸ್ಥಳದ ಶಾಂತಿವನದಲ್ಲಿ ವಿಶ್ರಾಂತಿಯಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಕಳೆದ ಒಂದು ವಾರದ ಹಿಂದಷ್ಟೇ ಮೈಸೂರಿನ ಸಿವಿಲ್ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸಲು ಆದೇಶ ನೀಡಿತ್ತು. ಇದರ ಅನ್ವಯ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಮಾಜಿ ಸಿಎಂ ಸೇರಿ ನಾಲ್ಕು ಜನರ ವಿರುದ್ಧ 9 ಐಪಿಸಿ ಸೆಕ್ಷನ್ ಗಳಡಿ [ಸೆಕ್ಷನ್ 120ಬಿ, 197, 166, 167, 169, 200, 417, 409, 420 ಹಾಗೂ ಸೆಕ್ಷನ್ 468] ಪ್ರಕರಣ ದಾಖಲಿಸಲಾಗಿದೆ. ಎಫ್‍ಐಆರ್ ದಾಖಲಾಗಿರುವ ಕುರಿತು ಡಿಸಿಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?
ಮೈಸೂರಿನ ವಿಜಯನಗರದಲ್ಲಿರುವ ಸಿದ್ದರಾಮಯ್ಯ ನಿವಾಸದ ಜಾಗದ ಕುರಿತಾಗಿ ಅಕ್ರಮ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ನಗರದ ಗಂಗರಾಜು ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ಮೈಸೂರು ನ್ಯಾಯಾಲಯದ ಮೊರೆ ಹೋಗಿದ್ದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿದ್ದ ಜಾಗವನ್ನು ಸಿದ್ದರಾಮಯ್ಯ ಪ್ರಭಾವ ಬಳಸಿ ಡಿನೋಟಿಫೈ ಮಾಡಿಸಿದ್ದಾರೆ. ಅದೇ ಜಾಗವನ್ನು ಸಿದ್ದರಾಮಯ್ಯ ಖರೀದಿ ಮಾಡಿ ಮನೆ ಕಟ್ಟಿದ್ದಾರೆ. ಅಷ್ಟೇ ಅಲ್ಲದೇ ನಗರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯದೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿದ್ದಾರೆ ಎಂದು ಗಂಗಾರಾಜು ಆರೋಪ ಮಾಡಿದ್ದರು.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಗಂಗರಾಜು, 30 ಗುಂಟೆ ಜಾಗ ಅದರ ಸುತ್ತಾ 400-500 ಎಕರೆ ಜಾಗವನ್ನು ಭೂಸ್ವಾಧಿನ ಮಾಡಿಕೊಳ್ಳುತ್ತಾರೆ. ಅದರಲ್ಲಿ ಲೇಔಟ್ ಮಾಡಲು ನಿರ್ಧಾರ ಮಾಡಿದ್ದರು. ಆದರೆ ಈ 30 ಗುಂಟೆ ಜಾಗವನ್ನು ಭೂಸ್ವಾಧಿನ ಮಾಡಿಕೊಳ್ಳದೆ ಪರೋಕ್ಷವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ತಿಳಿಸಿದ್ದರು.

ಸದ್ಯ ಸಿದ್ದರಾಮಯ್ಯ ಜೊತೆ ಮುಡಾದ ಮಾಜಿ ಅಧ್ಯಕ್ಷರಾದ ಸಿ. ಬಸವೇಗೌಡ, ಡಿ ಧೃವಕುಮಾರ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಸಿ. ಬಸವೇಗೌಡ ಕೂಡ ಸಿದ್ದರಾಮಯ್ಯ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಗಂಗರಾಜು ಆರೋಪಿಸಿದ್ದರು.

Comments

Leave a Reply

Your email address will not be published. Required fields are marked *