ಕೊನೆಗೂ ರಕ್ಷಿತಾರ ಬೇಡಿಕೆಯನ್ನು ಈಡೇರಿಸಿದ ದರ್ಶನ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊನೆಗೂ ಕ್ರೇಜಿ ಕ್ವೀನ್ ರಕ್ಷಿತಾರ ಬೇಡಿಕೆಯಂತೆ ಗಾಯಕ ಚೆನ್ನಪ್ಪರನ್ನು ಭೇಟಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ರಕ್ಷಿತಾ ತಮ್ಮ ಫೇಸ್‍ಬುಕ್ ಪೇಜ್ ನಲ್ಲಿ ಗಾಯಕ ಮತ್ತು ಡ್ಯಾನ್ಸರ್ ಆಗಿರುವ ಚೆನ್ನಪ್ಪ ನಿಮ್ಮನ್ನು ಭೇಟಿಯಾಗಲು ಕಾತುರದಿಂದ ಕಾಯುತ್ತಿದ್ದಾನೆ ಎಂದು ಬರೆದುಕೊಂಡಿದ್ದರು.

ಸದ್ಯ ರಕ್ಷಿತಾ ಖಾಸಗಿ ಚಾನೆಲ್ ನ ಡ್ಯಾನ್ಸ್ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿದ್ದಾರೆ. ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿರುವ ಚೆನ್ನಪ್ಪ ತಾವು ದರ್ಶನ್ ಪಕ್ಕಾ ಅಭಿಮಾನಿಯಾಗಿದ್ದು, ಒಂದು ಸಾರಿ ಅವರನ್ನು ಭೇಟಿಯಾಗುವ ಅವಕಾಶ ಕಲ್ಪಿಸುವಂತೆ ರಕ್ಷಿತಾರ ಮುಂದೆ ಮನವಿ ಮಾಡಿಕೊಂಡಿದ್ದರು. ಚೆನ್ನಪ್ಪ ಅವರು ತಮ್ಮ ನೆಚ್ಚಿನ ನಟ ದರ್ಶನ್ ರನ್ನು ಭೇಟಿಯಾದ ಫೋಟೋವನ್ನು ತಮ್ಮ ಫೇಸ್ ಬುಕ್ ಪೇಜ್‍ನಲ್ಲಿ ರಕ್ಷಿತ ಈಗ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಫೇಸ್‍ಬುಕ್ ನಲ್ಲಿ ಹೀಗೆ ಬರೆಯಲಾಗಿತ್ತು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇದು ನನ್ನ ಸ್ಪೆಶಲ್ ರಿಕ್ವೆಸ್ಟ್. ಈ ಫೋಟೋದಲ್ಲಿರುವವನು ಚೆನ್ನಪ್ಪ. ಜಿ-ಕನ್ನಡ ಚಾನೆಲ್‍ನ ಸರೆಗಮಪ-11ರ ಸಂಗೀತ ಕಾರ್ಯಕ್ರಮದ ವಿಜೇತನಾಗಿದ್ದು ಜೊತೆಗೆ ಒಳ್ಳೆಯ ಡ್ಯಾನ್ಸರ್. ನಿಮಗೆ ಕೋಟ್ಯಾಂತರ ಅಭಿಮಾನಿಗಳಿರುವುದು ನನಗೆ ಗೊತ್ತಿದೆ. ಆ ಅಭಿಮಾನಿಗಳಲ್ಲಿ ಈ ಚೆನ್ನಪ್ಪ ಕೂಡ ಒಬ್ಬನಾಗಿದ್ದಾನೆ. ನಿಮ್ಮನ್ನು ಭೇಟಿಯಾಗುವುದು ಚೆನ್ನಪ್ಪನ ಜೀವನದ ಗುರಿಯಾಗಿದೆ. ಪ್ಲೀಸ್ ಈತನನ್ನು ಭೇಟಿಯಾಗಿ ಎಂದು ರಕ್ಷಿತಾ ಬರೆದುಕೊಂಡಿದ್ದರು.

ದರ್ಶನ್ ಮತ್ತು ರಕ್ಷಿತಾ ಅಭಿನಯಸಿದ್ದ ಸಿನಿಮಾಗಳೆಲ್ಲಾ ಸೂಪರ್ ಹಿಟ್ ಆಗಿವೆ. ಹೀಗಾಗಿ ರಕ್ಷಿತಾ ಮತ್ತು ದರ್ಶನ್ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದಾರೆ. ಕಲಾಸಿಪಾಳ್ಯ, ಸುಂಟರಾಗಾಳಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ದರ್ಶನ್ ಮತ್ತು ರಕ್ಷಿತಾ ಜೊತೆಯಾಗಿ ನಟಿಸಿದ್ದಾರೆ. ಮದುವೆಯಾದ ಬಳಿಕ ಹಿರಿತೆರೆಯಿಂದ ದೂರವಾದ ರಕ್ಷಿತಾ ಕಿರುತೆರೆಯಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

 

Comments

Leave a Reply

Your email address will not be published. Required fields are marked *