ಜೆಡಿಎಸ್‍ನಲ್ಲಿ ಎಂಎಲ್‍ಸಿ ಸ್ಥಾನಕ್ಕೆ ಫೈಟ್- ನಿಷ್ಠರಿಗೆ ಕೊಡಿ ಅಂತಿದ್ದಾರೆ ಕಾರ್ಯಕರ್ತರು

ಬೆಂಗಳೂರು: ಜೂನ್‍ನಲ್ಲಿ ಖಾಲಿಯಾಗಲಿರುವ ಒಂದು ವಿಧಾನ ಪರಿಷತ್ ಸ್ಥಾನಕ್ಕೆ ಜೆಡಿಎಸ್‍ನಲ್ಲಿ ಬಿಗ್ ಫೈಟಿಂಗ್ ಪ್ರಾರಂಭ ಆಗಿದೆ. ಒಂದು ಸ್ಥಾನಕ್ಕೆ ಹಲವರು ಆಕಾಂಕ್ಷಿಗಳು ಇದ್ದು, 6 ತಿಂಗಳ ಮುಂಚೆಯೇ ಸ್ಥಾನಕ್ಕಾಗಿ ಲಾಬಿ ಆರಂಭ ಮಾಡಿದ್ದಾರೆ. ತಮಗೆ ಸ್ಥಾನ ಕೊಡಿ ಅಂತ ವರಿಷ್ಠ ದೇವೇಗೌಡರಿಗೆ ಈಗಿಂದನೇ ಒತ್ತಡಗಳನ್ನ ಹಾಕೋ ಕೆಲಸಗಳು ಜೆಡಿಎಸ್‍ನಲ್ಲಿ ಜೋರಾಗಿ ನಡೆಯುತ್ತಿದೆ.

ಸದ್ಯ ಟಿ.ಎ.ಶರವಣ ಪರಿಷತ್ ಸದಸ್ಯರಾಗಿದ್ದಾರೆ. ಜೂನ್‍ಗೆ ಇವರ ಅವಧಿ ಮುಕ್ತಾಯವಾಗಲಿದೆ. ವಿಧಾನ ಸಭೆಯಿಂದ ಪರಿಷತ್‍ಗೆ ಆಯ್ಕೆಯಾಗಲಿರುವ ಈ ಸ್ಥಾನಕ್ಕೆ ಅಗತ್ಯವಾದ ಸಂಖ್ಯಾಬಲ ಜೆಡಿಎಸ್‍ಗೆ ಇದೆ. ಹೀಗಾಗಿ ಒಂದು ಸ್ಥಾನ ನೀರಾಯಾಸವಾಗಿ ಜೆಡಿಎಸ್‍ಗೆ ಸಿಗಲಿದೆ. ಈ ಒಂದು ಸ್ಥಾನಕ್ಕೆ ಈಗಾಗಲೇ ಅನೇಕ ನಾಯಕರು, ಮುಖಂಡರು ಲಾಬಿ ಆರಂಭ ಮಾಡಿದ್ದಾರೆ. ಶರವಣ ಅವರು ಮತ್ತೊಮ್ಮೆ ಪರಿಷತ್‍ಗೆ ಆಯ್ಕೆಯಾಗೋ ಆಸೆ ವ್ಯಕ್ತಪಡಿಸಿದ್ದಾರೆ. ಪಕ್ಷ ಮತ್ತೊಂದು ಅವಕಾಶ ಕೊಟ್ಟರೆ ಪಕ್ಷದ ಕೆಲಸ ಮಾಡ್ತೀನಿ ಅಂತ ಹೇಳ್ತಿದ್ದಾರೆ. ಶರವಣ ಜೊತೆಗೆ ಬೆಂಗಳೂರು ಘಟಕ ಅಧ್ಯಕ್ಷ ಪ್ರಕಾಶ್, ಮಾಜಿ ಶಾಸಕ ಕೋನರೆಡ್ಡಿ ಸೇರಿ ಹಲವರು ರೇಸ್ ನಲ್ಲಿ ಇದ್ದಾರೆ.

ಪಕ್ಷದ ನಿಷ್ಠರಿಗೆ ಸ್ಥಾನ ಕೊಡಿ:
ಒಂದು ಕಡೆ ಪರಿಷತ್ ಸ್ಥಾನದ ಆಕಾಂಕ್ಷಿಗಳು ಲಾಬಿ ಪ್ರಾರಂಭ ಮಾಡ್ತಿದ್ರೆ, ಮತ್ತೊಂದು ಕಡೆ ಪಕ್ಷದ ಕಾರ್ಯಕರ್ತರು ಹೊಸ ಡಿಮ್ಯಾಂಡ್ ವರಿಷ್ಠರ ಮುಂದೆ ಇಡೋಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇಂತಹ ಸನ್ನಿವೇಶ ಬಂದ್ರೆ ಜೆಡಿಎಸ್‍ನಲ್ಲಿ ಹೊರಗಡೆಯಿಂದ ಬೇರೆ ಅವರು ಬಂದು ಆಯ್ಕೆ ಆಗುತ್ತಾರೆ ಅನ್ನೋ ಆರೋಪ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಹೊರಗಡೆಯಿಂದ ಕರೆತಂದು ಈ ಬಾರಿ ಸ್ಥಾನ ಕೊಡಬಾರದು ಅಂತ ಕಾರ್ಯಕರ್ತರು ಷರತ್ತು ಹಾಕಿದ್ದಾರೆ. ಪಕ್ಷದಲ್ಲಿ ದುಡಿಯೋರಿಗೆ, ಪಕ್ಷದ ಕಾರ್ಯಕರ್ತರಿಗೆ ಪರಿಷತ್ ಸ್ಥಾನ ಕೊಡಬೇಕು ಅಂತ ವರಿಷ್ಠರಿಗೆ ಅಹವಾಲು ಸಲ್ಲಿಸಲು ನಿರ್ಧಾರ ಮಾಡಿದ್ದಾರೆ. ಒಂದು ವೇಳೆ ಹೊರಗಡೆ ಅವರಿಗೆ ಕೊಟ್ರೆ ನಮ್ಮ ದಾರಿ ನಾವು ನೋಡಿಕೊಳ್ತೀವಿ ಅಂತ ವರಿಷ್ಠರಿಗೆ ಎಚ್ಚರಿಕೆ ಸಂದೇಶವನ್ನು ಕೊಟ್ಟಿದ್ದಾರೆ.

ಲಾಬಿ, ಒತ್ತಡ, ಆಕಾಂಕ್ಷಿಗಳು ಯಾರೇ ಇರಲಿ. ಜೆಡಿಎಸ್‍ನಲ್ಲಿ ಏನೇ ತೀರ್ಮಾನ ಆಗಬೇಕಾದರೂ ಪದ್ಮನಾಭ ನಗರವೇ ಹೈಕಮಾಂಡ್. ದೇವೇಗೌಡರ ಮಾತೇ ಶಾಸನ. ಅವರ ಮಾತು ಯಾರು ಮಿರೋಕೆ ಸಾಧ್ಯವಿಲ್ಲ. ಹೀಗಾಗಿ ಆಕಾಂಕ್ಷಿಗಳನ್ನ ಸುಧಾರಿಸಿಕೊಂಡು, ಕಾರ್ಯಕರ್ತರ ಡಿಮಾಂಡನ್ನು ಪೂರೈಸಬೇಕಾದ ತಂತ್ರಗಾರಿಗೆ ದೇವೇಗೌಡರು ಮಾಡಬೇಕು. ರಾಜಕೀಯ ಚತುರ ದೇವೇಗೌಡರು ಈ ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ ಎಂಬುದೇ ಸದ್ಯದ ಕುತೂಹಲವಾಗಿದೆ.

Comments

Leave a Reply

Your email address will not be published. Required fields are marked *