ಮಗುವಿಗೆ ತೊಂದ್ರೆಯಾಗುತ್ತೆ, ಕುಡಿಬೇಡ ಎಂದು ಎಷ್ಟು ಹೇಳಿದ್ರೂ ಕೇಳದ ಗರ್ಭಿಣಿ ಪತ್ನಿಯನ್ನ ಕೊಂದೇಬಿಟ್ಟ!

ಮುಂಬೈ: ಕುಡಿಬೇಡ ಎಂದು ಎಷ್ಟು ಹೇಳಿದರೂ ಕೇಳಲಿಲ್ಲವೆಂದು ವ್ಯಕ್ತಿಯೊಬ್ಬ ತನ್ನ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದು ಮನೆಯ ಹಿಂದೆಯೇ ಸಮಾಧಿ ಮಾಡಿರುವ ಘಟನೆ ನಗರದ ಬಿವಂಡಿಯಲ್ಲಿ ನಡೆದಿದೆ.

ಮಾಯ್ ಪತಿಯಿಂದ ಹತ್ಯೆಯಾದ ದುರ್ದೈವಿ. ಸದ್ಯಕ್ಕೆ ಆರೋಪಿ ಪತಿ ಕಲ್ಪೇಶ್ ಠಾಕ್ರೆಯ್ ಪೊಲೀಸರಿಗೆ ಶರಣಾಗಿದ್ದಾನೆ. ಗಣೇಶ್ಪುರಿ ಪೊಲೀಸರು ಈತನನ್ನು ಬಂಧಿಸಿದ್ದು ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ.

ನಡೆದಿದ್ದೇನು?: ಮಾಯ್ 8 ತಿಂಗಳ ಗರ್ಭಿಣಿಯಾಗಿದ್ದು, ಕುಡಿತದ ಅಭ್ಯಾಸ ಇತ್ತು. ಆದ್ದರಿಂದ ಪತಿ ಕಲ್ಪೇಶ್ ನಮ್ಮ ಮಗುವಿಗೆ ತೊಂದರೆಯಾಗುತ್ತದೆ, ಕುಡಿಯುವುದನ್ನು ನಿಲ್ಲಿಸು ಎಂದು ಆಗಾಗ ಹೇಳುತ್ತಿದ್ದ. ಆದರೆ ಆಕೆ ಪತಿಯ ಮಾತಿಗೆ ಕಿವಿ ಕೊಡಲಿಲ್ಲ. ಮಾರ್ಚ್ 12 ರಂದು ಮತ್ತೆ ಇದೇ ವಿಚಾರಕ್ಕೆ ಜಗಳವಾಗಿ ಕೋಪಗೊಂಡ ಕಲ್ಪೇಶ್ ಪತ್ನಿಯನ್ನು ಕೊಲೆ ಮಾಡಿ ಮನೆಯ ಹಿಂದೆ ಸಮಾಧಿ ಮಾಡಿದ್ದಾನೆ. ಒಂದು ದಿನದ ನಂತರ ನನ್ನ ಹೆಂಡತಿಯ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದಾನೆ. ಆದರೆ ಬಳಿಕ ಆತನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಪೇಶ್ ಮೂರು ವರ್ಷಗಳ ಹಿಂದೆ ಬಾರಿನಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ ಮಾಯ್ ಳನ್ನು ನೋಡಿ ಪ್ರೀತಿ ಮಾಡಿದ್ದು, ಕಳೆದ ವರ್ಷ ಇಬ್ಬರೂ ವಿವಾಹವಾಗಿದ್ದರು. ಮಹಿಳೆಗೆ ಕುಡಿತದ ಅಭ್ಯಾಸ ಇದ್ದುದ್ದರಿಂದ ಪ್ರತಿದಿನ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಅದೇ ರೀತಿ ಮಾರ್ಚ್ 11 ರಂದು ಈ ಜಗಳ ವಿಕೋಪಕ್ಕೆ ತಿರುಗಿ ಮಾಯ್ ಳನ್ನು ಕೊಂದು ತಮ್ಮ ಮನೆ ಬಳಿ ಸಮಾಧಿ ಮಾಡಿದ್ದಾನೆ. ಸದ್ಯಕ್ಕೆ ಮೃತದೇಹದ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವೈದ್ಯರ ವರದಿಗಾಗಿ ನಾವು ಕಾಯುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ಶೇಖರ್ ಧೋಬ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *