ಮಗನನ್ನು ಕೊಂದು ಕೋಳಿ ಫಾರಂನಲ್ಲಿ ಮೃತದೇಹವನ್ನು ಹೂತಿಟ್ಟ ತಂದೆ

ಹೈದರಾಬಾದ್: ತಂದೆಯೊಬ್ಬ ತನ್ನ ಮಗನನ್ನು ಕೊಲೆ ಮಾಡಿ ಆತನ ಮೃತದೇಹವನ್ನು ಕೋಳಿ ಫಾರಂನಲ್ಲಿ ಹೂತಿಟ್ಟ ಘಟನೆ ಗುರುವಾರ ಹೈದರಾಬಾದ್‍ನ ಮೆಡಕ್ ಜಿಲ್ಲೆಯ ಇಬ್ರಾಹಿಂಪುರದಲ್ಲಿ ನಡೆದಿದೆ.

ಶ್ರವಣ್ ಕುಮಾರ್ ರೆಡ್ಡಿ(24) ಕೊಲೆಯಾದ ಮಗ. ಸ್ಥಳೀಯ ಸಂಘದ ಅಧ್ಯಕ್ಷನಾಗಿರುವ ನಾರಾಯಣ ರೆಡ್ಡಿ ತನ್ನ ಮಗ ಶ್ರವಣ್‍ನನ್ನು ಕೊಲೆ ಮಾಡಿದ್ದಾನೆ. ಶ್ರವಣ್ ಆರೋಪಿ ನಾರಾಯಣ ರೆಡ್ಡಿಯ ಎರಡನೇ ಮಗನಾಗಿದ್ದು, ಮೆಡ್ಚಲ್‍ನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದನು. ದಸರಾ ಹಬ್ಬಯಿರುವ ಕಾರಣ ಶ್ರವಣ್ ತನ್ನ ಮನೆಗೆ ಬಂದಿದ್ದನು.

ಸೋಮವಾರ ಸಂಜೆ ನಾರಾಯಣ ರೆಡ್ಡಿ ಹಾಗೂ ಶ್ರವಣ್ ಕುಮಾರ್ ನಡುವೆ ಜಗಳವಾಗಿದೆ. ಜಗಳವಾಡಿದ ಸಮಯದಲ್ಲಿ ಮದ್ಯದ ನಶೆಯಲ್ಲಿದ್ದ ನಾರಾಯಣ ರೆಡ್ಡಿ ತನ್ನ ಮಗ ಶ್ರವಣ್‍ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಗ ಮೃತಪಟ್ಟಿದ್ದಾನೆ ಎಂದು ತಿಳಿದ ತಕ್ಷಣ ನಾರಾಯಣ ಆತನ ಮೃತದೇಹವನ್ನು ಕೋಳಿ ಫಾರಂ ಹೂತಿಟ್ಟಿದ್ದಾನೆ.

ಶ್ರವಣ ಎಲ್ಲಿಯೂ ಕಾಣಿಸದಿದ್ದಾಗ ಗ್ರಾಮಸ್ಥರಿಗೆ ಅನುಮಾನ ಮೂಡಿದೆ. ಅಲ್ಲದೆ ಶ್ರವಣ್ ನಾಪತ್ತೆ ಆದಾಗಿನಿಂದ ಕುಟುಂಬಸ್ಥರು ಆತನ ಬಗ್ಗೆ ಎಲ್ಲಿಯೂ ಮಾತನಾಡುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ಪೊಲೀಸರು ನಾರಾಯಣ ರೆಡ್ಡಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಾರಾಯಣ ತನ್ನ ಮಗನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *