ಅಪ್ಪ ಅಮ್ಮನ ಜಗಳದಲ್ಲಿ 2 ವರ್ಷದ ಕಂದಮ್ಮ ಸಾವು!

ಚಿತ್ರದುರ್ಗ: ಅಪ್ಪ ಅಮ್ಮನ ಜಗಳದಲ್ಲಿ 2 ವರ್ಷದ ಮಗು ಸಾವನ್ನಪ್ಪಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಮಹ್ಮದ್ ರಿಹಾನ್(2) ಮೃತ ಮಗು. ಸಾಹಿರಿಯೂರು ಪಟ್ಟಣದ ಆಜಾದ್ ಬಡಾವಣೆಯ ಜಾಫರ್ ಮಗುವನ್ನು ಕೊಂದಿದ್ದಾನೆ. ಈತ ನಿತ್ಯವು ಕುಡಿದು ಬಂದು ಪತ್ನಿ ಜತೆ ಗಲಾಟೆ ಮಾಡುತ್ತಾ, ಕಿರುಕುಳ ನೀಡುತ್ತಿದ್ದನು. ಕಳೆದ ಶುಕ್ರವಾರ ಕೂಡ ಪತ್ನಿ ತಬ್ಸುಮ್ ಬಾನು ಜೊತೆ ಜಗಳವಾಡುತ್ತಿದ್ದನು.

ಈ ಗಲಾಟೆ ವೇಳೆ ಅಂಗವಿಕಲ ಮಗುವನ್ನು ಕಸಿದುಕೊಂಡು ಜಾಫರ್ ಗೋಡೆಗೆ ಎಸೆದಿದ್ದಾನೆ. ಆಗ ಹೊಟ್ಟೆಗೆ ಬಲವಾದ ಪೆಟ್ಟಾಗಿ ರಿಹಾನ್ ಅಸ್ವಸ್ಥಗೊಂಡಿದ್ದ. ತಕ್ಷಣ ಸಮೀಪದ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿತ್ತು. ಆದರೆ 2 ವರ್ಷದ ಮಹ್ಮದ್ ರಿಹಾನ್ ಮೊದಲೇ ಹೃದಯಸಂಬಂಧಿ ಕಾಯಿಲೆ ಹಾಗೂ ಅಂಗವೈಫಲ್ಯದಿಂದ ಬಳಲುತ್ತಿದ್ದ. ಮತ್ತೆ ಹೊಟ್ಟೆಯ ಮೇಲಾದ ಬಲವಾದ ಪೆಟ್ಟಿನಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾನೆ.

ಮಗುವಿನ ಸಾವಿನಿಂದ ಆಕ್ರೋಶಗೊಂಡ ಪತ್ನಿ ತಬ್ಸುಮ್ ಬಾನು ಹಿರಿಯೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಜಾಫರ್ ನನ್ನು ಬಂಧಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಜಾಫರ್ ನ ಸಹೋದರಿ ಕೂಡ ಶಾಮೀಲಾಗಿದ್ದಾರೆಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆರೋಪಿ ಜಾಫರ್ ನನ್ನು ವಿಚಾರಣೆಗೊಳಪಡಿಸಿದ್ದು, ಪೊಲೀಸರು ಪ್ರಕರಣ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ. ಈ ಕುರಿತು ಹಿರಿಯೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *