ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ

ಚೆನ್ನೈ: ಒಂದೇ ಕುಟುಂಬದ ನಾಲ್ಕು ಮಂದಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದಿದೆ.

ಸುಂದರಲಿಂಗಂ(40), ಮಹೇಶ್ವರಿ(35), ಕೃತಿಕ(17) ಹಾಗೂ ಸಮೀಕ್ಷಾ(13) ಆತ್ಮಹತ್ಯೆ ಮಾಡಿಕೊಂಡವರು. ನಾಲ್ವರು ಅರೋವಿಲ್ಲೆ ಬಳಿಯಿರುವ ಕುಯಿಲಪಾಲಯಂ ನಿವಾಸಿಗಳಾಗಿದ್ದು, ಹೆಚ್ಚುತ್ತಿರುವ ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸುಂದರಲಿಂಗಂ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲದೆ ಆತನ ಪತ್ನಿ ಮಹೇಶ್ವರಿ ಅರೋವಿಲ್ಲೆಯ ಹೋಟೆಲ್‍ಯೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಅರೋವಿಲ್ಲೆಯ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರದಿಂದ ಮಹೇಶ್ವರಿ ಕೆಲಸಕ್ಕೆ ಹೋಗಲಿಲ್ಲ. ಹೀಗಾಗಿ ಹೋಟೆಲ್ ಮಾಲೀಕ ಗುರುವಾರ ರಾತ್ರಿ ಸಿಬ್ಬಂದಿಗೆ ಮಹೇಶ್ವರಿಯನ್ನು ನೋಡಿಕೊಂಡು ಬಾ ಎಂದು ಹೇಳಿ ಆಕೆಯ ಮನೆಗೆ ಕಳುಹಿಸಿಕೊಟ್ಟಿದ್ದರು. ಸಿಬ್ಬಂದಿ ಮಹೇಶ್ವರಿ ಮನೆಗೆ ಹೋದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಾಗಿಲನ್ನು ಒಡೆದು ಮನೆಯನ್ನು ಪ್ರವೇಶಿಸಿದಾಗ ಸುಂದರಲಿಂಗಂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ಪತ್ನಿ ಹಾಗೂ ಮಕ್ಕಳ ಮೃತದೇಹ ಹಾಸಿಗೆ ಮೇಲೆ ಬಿದ್ದಿತ್ತು.

ಸುಂದರಲಿಂಗಂ ಹಾಗೂ ಮಹೇಶ್ವರಿಗೆ ಸುಮಾರು 10 ಲಕ್ಷವರೆಗೂ ಸಾಲ ಇದೆ. ಕಳೆದ ವರ್ಷ ಅವರು ತಮ್ಮ ಪಕ್ಕದ ಮನೆಯವರಿಂದ ದೀಪಾವಳಿ ಚಿಟ್ ಫಂಡ್‍ಗೆ ಹಣವನ್ನು ಪಡೆದುಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *