1 ಕೋಟಿಗಾಗಿ ಮಗಳಿಗೆ ಸೈನೈಡ್ ಹಾಕಿ, ನೇಣು ಬಿಗಿದು ಆತ್ಮಹತ್ಯೆಗೆ ಯತ್ನ ಎಂದು ನಂಬಿಸಿದ!

ರಾಮನಗರ: ಹಣಕ್ಕಾಗಿ ಮಗಳನ್ನೇ ಕೊಂದ ಪಾಪಿ ತಂದೆ ಸೇರಿದಂತೆ ನಾಲ್ವರನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ.

ವೀಣಾ (24) ಕೊಲೆಯಾಗಿದ್ದ ಗೃಹಿಣಿ. ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರದ ಕುಳ್ಳಯ್ಯನತೋಟದಲ್ಲಿ ಜನವರಿ 11 ರಂದು ಕೊಲೆ ಪ್ರಕರಣ ನಡೆದಿದ್ದು, ಚಿಕ್ಕಬ್ಯಾಟಪ್ಪ ಅಲಿಯಾಸ್ ಸಂಪಂಗಿ, ಲಕ್ಷ್ಮಿ, ಇಸ್ಮಾಯಿಲ್ ಖಾನ್, ಮುನಿರಾಜು ಬಂಧಿತ ಆರೋಪಿಗಳು.

ಒಂದು ವರ್ಷದ ಹಿಂದೆ ತನ್ನ ಜಮೀನನ್ನು 2 ಕೋಟಿ ರೂ. ಹಣಕ್ಕೆ ಸಂಪಂಗಿ ಮಾರಾಟ ಮಾಡಿದ್ದ. ಪತ್ನಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಸಂಪಂಗಿ ಲಕ್ಷ್ಮಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಆಕೆಗೆ ಒಂದು ಕೋಟಿ ರೂ. ಹಣವನ್ನು ನೀಡಿ ಉಳಿದ ಒಂದು ಕೋಟಿ ರೂ. ಹಣವನ್ನು ಮಗಳು ವೀಣಾಗೆ ನೀಡಲು ನಿರ್ಧರಿಸಿದ್ದ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ವೀಣಾ ಕುಂದಾಪುರದಲ್ಲಿರುವ ಪತಿ ಮನೆಯಿಂದ ತವರು ಮನೆಗೆ ಬಂದಿದ್ದರು. ಮನೆಗೆ ಬಂದಿದ್ದ ಹಿನ್ನೆಲೆಯಲ್ಲಿ ಮಗಳನ್ನು ಕೊಲೆ ಮಾಡಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದ.

ಗಂಡನಿಗೆ ಅನುಮಾನ: ಪತ್ನಿ ಆತ್ಮಹತ್ಯೆ ಮಾಡಲು ಸಾಧ್ಯವಿಲ್ಲ. ಕೊಲೆ ನಡೆದಿರಬಹುದು ಎನ್ನುವ ಶಂಕೆಯಿದೆ ಎಂದು ಪತಿ ಕಗ್ಗಲೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ವೀಣಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಪರೀಕ್ಷೆ ವೇಳೆ ಸೈನೈಡ್ ದೇಹದಲ್ಲಿರುವ ಅಂಶ ಪತ್ತೆಯಾಗಿತ್ತು. ಅಷ್ಟೇ ಅಲ್ಲದೇ ಮತಪಟ್ಟ ನಂತರ ಆಕೆಯನ್ನು ನೇಣಿಗೆ ಹಾಕಿರುವ ವಿಚಾರ ಬೆಳಕಿಗೆ ಬಂದಿತ್ತು.

ಮರಣೋತ್ತರ ಪರೀಕ್ಷೆಯ ಫಲಿತಾಂಶ ಆಧಾರದಲ್ಲಿ ಪೊಲೀಸರು ತಂದೆ ಸಂಪಂಗಿಯನ್ನು ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿತ್ತು. ಒಂದು ಕೋಟಿ ರೂ. ಹಣವನ್ನು ತನ್ನ ಬಳಿಯೇ ಇಟ್ಟುಕೊಳ್ಳಲು ಈ ಕೃತ್ಯ ನಡೆಸಲಾಗಿದೆ ಎಂದು ಒಪ್ಪಿಕೊಂಡಿದ್ದಾನೆ. ಮದ್ಯ ಕುಡಿಸಿ, ಬಳಿಕ ಸೈನೈಡ್ ಇರುವ ಇಂಜೆಕ್ಷನ್ ದೇಹಕ್ಕೆ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.

 

Comments

Leave a Reply

Your email address will not be published. Required fields are marked *