ನೀರಿನಲ್ಲಿ ಮುಳುಗಿ ತಂದೆ ಸೇರಿದಂತೆ ಮೂವರು ಮಕ್ಕಳ ದಾರುಣ ಸಾವು

ಸಾಂದರ್ಭಿಕ ಚಿತ್ರ

ಕಾರವಾರ: ನದಿಯಲ್ಲಿ ಮುಳುಗಿ ತಂದೆ ಸೇರಿದಂತೆ ಮೂವರು ಮಕ್ಕಳು ಮೃತಪಟ್ಟು, ತಾಯಿ ಅಸ್ವಸ್ಥವಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಬೊಮ್ನಳ್ಳಿ ಬಳಿ ನಡೆದಿದೆ.

ತಂದೆ ಧೂಳು ಗಾವಡೆ (48) ಮಕ್ಕಳಾದ ಕೃಷ್ಣಾ ಧೂಳು ಗಾವಡೆ (6), ಗಾಯಿತ್ರಿ ಧೂಳು ಗಾವಡೆ (9) ಹಾಗೂ ಸತೀಶ್ ಬೀರು ಗಾವಡೆ (7) ಮೃತ ದುರ್ದೈವಿಗಳು. ಇಂದು ಸಂಜೆ ದಂಪತಿ ಸೇರಿದಂತೆ ಮೂವರು ಮಕ್ಕಳು ಅಂಬಿಕಾನಗರ ಸಮೀಪದ ಬೊಮ್ನಳ್ಳಿ ಬಳಿಯ ಕಾಳಿ ನದಿಗೆ ಬಟ್ಟೆ ತೊಳೆಯಲು ತೆರಳಿದ್ದರು. ಈ ವೇಳೆ ನದಿಯಲ್ಲಿ ಆಟವಾಡುತ್ತಿದ್ದ ಗಾಯಿತ್ರಿ ಮೊದಲು ನದಿಯಲ್ಲಿ ಕೊಚ್ಚಿ ಹೋಗಿದ್ದಾಳೆ. ಬಳಿಕ ಇಬ್ಬರೂ ಮಕ್ಕಳು ಆಕೆಯನ್ನೆ ಹಿಂಬಾಲಿಸಲು ಹೋಗಿ ನದಿಯಲ್ಲಿ ಮುಳುಗಿದ್ದಾರೆ.

ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ದಂಪತಿ ಏಕಾಏಕಿ ನೀರಿಗೆ ಜಿಗಿದಿದ್ದಾರೆ. ನದಿಯಲ್ಲಿ ನೀರು ಹೆಚ್ಚಿದ್ದರಿಂದ ಇಬ್ಬರೂ ನೀರು ಪಾಲಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇನ್ನುಳಿದವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳಿಗಾಗಿ ನದಿಯಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ. ಸದ್ಯದ ಮಾಹಿತಿಗಳ ಪ್ರಕಾರ ಗಾಯಿತ್ರಿ ಮಗುವಿನ ಮೃತದೇಹ ಪತ್ತೆಯಾಗಿದೆ.

ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಾಮಿ ಬಾಯಿಯವರನ್ನು ಹಳಿಯಾಳದ ಆಸ್ಪತ್ರೆಗೆ ರವಾನಿಸಿಲಾಗಿದೆ. ಘಟನೆ ಸಂಬಂಧ ಅಂಬಿಕಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *