17 ದಿನದ ಹೆಣ್ಣು ಶಿಶುವನ್ನು ಗುಂಡಿಯೊಳಗಿಟ್ಟು ಬೆಂಕಿಕೊಟ್ಟ ಪಾಪಿ ತಂದೆ!

ಚೆನ್ನೈ: ತಂದೆಯೊಬ್ಬ ತನ್ನ 17 ದಿನದ ಹೆಣ್ಣು ಶಿಶುವನ್ನು ಜೀವಂತವಾಗಿ ಸುಟ್ಟ ಅಮಾನವೀಯ ಘಟನೆ ತಿರುಕೋವಿಲೂರ್ ಸಮೀಪದ ಅಥಂಡಮರುತುರ್ ಗ್ರಾಮದಲ್ಲಿ ನಡೆದಿದೆ.

ಪಾಪಿ ತಂದೆ ನವಜಾತ ಶಿಶುವನ್ನು ಈ ಹಿಂದೆಯೇ ಕೊಲೆಗೈಯಲು ಯತ್ನಿಸಿದ್ದನು. ಮಗು ಹುಟ್ಟಿ 3 ದಿನವಾದಾಗಲೇ ಅದನ್ನು ಕೊಲೆ ಮಾಡಲು ಯತ್ನಿಸಿದ್ದನು. ಆ ಸಂದರ್ಭದಲ್ಲಿ ಸಂಬಂಧಿಕರು ಮಗುವನ್ನು ರಕ್ಷಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವದಮರುತುರ್ ಗ್ರಾಮದ ನಿವಾಸಿಯಾಗಿರೋ ಡಿ ವರದರಾಜನ್ ಗೆ 15 ತಿಂಗಳ ಹಿಂದೆ ಸುಂದರೇಶಪುರಂ ಗ್ರಾಮದ ಸೌಂದರ್ಯ ಜೊತೆ ವಿವಾಹವಾಗಿತ್ತು. ಇವರಿಬ್ಬರೂ ಅಥಂಡಮರುತುರ್ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. 17 ದಿನದ ಹಿಂದೆಯಷ್ಟೇ ಪಾಂಡಿಚೇರಿಯ ಆಸ್ಪತ್ರೆಯೊಂದರಲ್ಲಿ ಈ ದಂಪತಿಗೆ ಹೆಣ್ಣು ಮಗುವೊಂದು ಜನಿಸಿತ್ತು. ತನಗೆ ಹುಟ್ಟಿದ ಮಗು ಹೆಣ್ಣಾಗಿದ್ದರಿಂದ ವರದರಾಜನ್ ನಿರಾಶೆಗೊಂಡಿದ್ದನು ಎಂದು ಪೊಲೀಸರು ವಿವರಿಸಿದ್ದಾರೆ.

ಮಂಗಳವಾರ ಮಧ್ಯರಾತ್ರಿ 12.30ರ ಸುಮಾರಿಗೆ ಸೌಂದರ್ಯ ಮಗುವಿಗೆ ಹಾಲುಣಿಸಿ ನಿದ್ದೆಗೆ ಜಾರಿದ್ದಳು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಆರೋಪಿ ಪತಿ, 500 ಮೀ. ದೂರದಲ್ಲಿರುವ ನದಿ ಪಾತ್ರದ ಬಳಿ ಸಣ್ಣ ಗುಂಡಿ ಅಗೆದು ಅದರೊಳಗೆ ಮಗುವನ್ನು ಮಲಗಿಸಿ ಬೆಂಕಿ ಕೊಡುವ ಮೂಲಕ ಸಜೀವ ದಹನ ಮಾಡಿದ್ದಾನೆ.

ಇತ್ತ ಮುಂಜಾನೆ 4 ಗಂಟೆ ಸುಮಾರಿಗೆ ಸೌಂದರ್ಯಗೆ ಎಚ್ಚರವಾಗಿದ್ದು, ತನ್ನ ಪಕ್ಕ ಮಲಗಿದ್ದ ಮಗು ಇಲ್ಲವಾಗಿದ್ದನ್ನು ಕಂಡು ಶಾಕ್ ಗೆ ಒಳಗಾಗಿದ್ದಾಳೆ. ಅಲ್ಲದೆ ಮಗುವನ್ನು ಹುಡುಕುವಂತೆ ಸಹಾಯ ಮಾಡಿ ಎಂದು ಜೋರಾಗಿ ಕಿರುಚಾಡಿದ್ದಾಳೆ.

ಈ ವೇಳೆ ವರದರಾಜನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕೂಡಲೇ ಮಹಿಳೆಯ ಸಂಬಂಧಿಕರು ಹಾಗೂ ಗ್ರಾಮಸ್ಥರು ತಿರುಕೋವಿಲೂರ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರ ಮುಂದೆಯೇ ಗುಂಡಿಯಿಂದ ಶಿಶುವಿನ ಮೃತದೇಹವನ್ನು ಹೊರತೆಗೆಯಲಾಯಿತು.

ವಿಚಾರಣೆಯ ವೇಳೆ ವರದರಾಜನ್, ಗಂಡು ಮಗುವಾಗುತ್ತದೆಂಬ ನಂಬಿಕೆಯಲ್ಲಿದ್ದೆ. ಅಲ್ಲದೆ ಒಂದು ವೇಳೆ ಹೆಣ್ಣು ಮಗುವಿಗೆ ಜನ್ಮ ನಿಡಿದರೆ ಆ ಮಗುವನ್ನು ಉಳಿಸಿಕೊಳ್ಳಲ್ಲ ಎಂದು ಪತ್ನಿ ಹಾಗೂ ಆಕೆಯ ಸಂಬಂಧಿಕರ ಬಳಿ ಹೇಳಿದ್ದೆ ಎಂದು ಪೊಲೀಸರ ಬಳಿ ಹೇಳಿದ್ದಾನೆ.

ಘಟನೆ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ), 315(ಭ್ರೂಣ ಹತ್ಯೆ) ಹಾಗೂ 498ಎ(ಪತಿ ಅಥವಾ ಪತಿಯ ಸಂಬಂಧಿಕರಿಂದ ಮಹಿಳೆಗೆ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

Comments

Leave a Reply

Your email address will not be published. Required fields are marked *