ಹಾಲು, ತರಕಾರಿ ರಸ್ತೆಗೆ ಸುರಿದು ಪ್ರತಿಭಟನೆ ಪ್ರಾರಂಭಿಸಿದ ರೈತರು

ಚಂಡೀಗಢ: ಇಂಧನ ಬೆಲೆ ಏರಿಕೆ ವಿರೋಧಿಸಿ ರಾಷ್ಟ್ರವ್ಯಾಪಿ ರೈತ ಸಂಘಟನೆಗಳು ಕೈಗೊಂಡಿರುವ ಪ್ರತಿಭಟನೆ ಮೊದಲ ದಿನ ರೈತರು ರಸ್ತೆ ಮೇಲೆ ಹಾಲು ಚಲ್ಲಿ, ತರಕಾರಿ ಹಾಗೂ ಹಣ್ಣುಗಳನ್ನು ಸುರಿದು ಮುಷ್ಕರ ಪ್ರಾರಂಭಿಸಿದ್ದಾರೆ.

ಪಂಜಾಬ್, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರೆತಿದೆ. 130 ರೈತ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಯಾವುದೇ ರೀತಿಯ ರಸ್ತೆ ತಡೆ ನಡೆಸುವುದಿಲ್ಲ ಹಾಗೂ ಶಾಂತಿಯುತವಾಗಿ ಮುಷ್ಕರ ನಡೆಸುವುದಾಗಿದೆ ಭರವಸೆ ನೀಡಿವೆ.

ಪಂಜಾಬ್‍ನಲ್ಲಿ ರೈತರು ರಸ್ತೆಗೆ ಹಾಲು ಚಲ್ಲಿದರೆ, ಮಹಾರಾಷ್ಟ್ರದ ನಾಸಿಕ್‍ನಲ್ಲಿ ಟೊಮೊಟೊವನ್ನು ರಸ್ತೆಯ ಮೇಲೆ ಸುರಿದು ಪ್ರತಿಭಟಿಸಲಾಗಿದೆ. ನಾಸಿಕ್ ನಿಂದ ಮುಂಬೈವರೆಗೆ 35 ಸಾವಿರ ರೈತರು ಕಾಲ್ನಡಿ ಮೂಲಕ 180 ಕಿ.ಮೀ. ಕ್ರಮಿಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಇದನ್ನು ಓದಿ: ಜೂನ್ 1 ರಿಂದ ದೇಶಾದ್ಯಂತ ಹಾಲು, ತರಕಾರಿ ಸರಬರಾಜು ಮಾಡದಿರಲು ರೈತರ ನಿರ್ಧಾರ!

ಕಾಂಗ್ರೆಸ್‍ನವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಹೀಗೆ ಮಾಡುತ್ತಿದ್ದಾರೆ. ಬಿಜೆಪಿ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಹಾಗೂ ಅವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಭೋಪಾಲ್‍ನಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ರೈತರು ವಿಧಿಸುವ ದರದಲ್ಲಿ ಹಾಲು ಮತ್ತು ತರಕಾರಿಯನ್ನು ಗ್ರಾಹಕರು ಖರೀದಿಸಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಪ್ರತಿಭಟನೆ ದೇಶದಲ್ಲಿ ಪ್ರಾರಂಭವಾಗಿದೆ. ದೇಶದಲ್ಲಿ ಇಂಧನ ಬೆಲೆ ಹೆಚ್ಚಳವನ್ನು ವಿರೋಧಿಸಿ ರೈತ ಸಂಘಟನೆಗಳು ಈ ಪ್ರತಿಭಟನೆಗೆ ಮುಂದಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ರೈತರು ಜೂನ್ 1ರಿಂದ ಜೂನ್ 10 ರವರೆಗೆ ಪ್ರತಿಭಟನೆ ನಡೆಸಲಿದ್ದಾರೆ.

ಹತ್ತು ದಿನಗಳ ಕಾಲ ರೈತರು ಹಾಲು ಹಾಗೂ ತಾವು ಬೆಳೆದ ತರಕಾರಿಯನ್ನು ಮಾರುಕಟ್ಟೆಗೆ ತರುವುದಿಲ್ಲ. ಹೀಗಾಗಿ ಗ್ರಾಹಕರು ರೈತರ ಬಳಿ ಹೋಗಿ ಅವರು ಹೇಳಿದ ದರ ನೀಡಿ ಖರೀದಿಸಬೇಕು ಎಂದು ರೈತರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *