ಅಧಿಕಾರಿಗಳನ್ನ ಕಚೇರಿಯೊಳಗೆ ಕೂಡಿಟ್ಟ ರೈತರು!

ಮೈಸೂರು: ಲೋಕಸಭಾ ಚುನಾವಣೆಯ ಕರ್ತವ್ಯದ ನೆಪ ಹೇಳುತ್ತಾ ನಾಲೆಗಳಿಗೆ ನೀರು ಹರಿಸುವುದನ್ನು ಮರೆತ ಅಧಿಕಾರ ವರ್ಗಕ್ಕೆ ರೈತರು ಬಿಸಿ ಮುಟ್ಟಿಸಿದ್ದಾರೆ.

ಮೈಸೂರಿನ ಟಿ. ನರಸೀಪುರದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿಯಲ್ಲಿ ರೈತರು ಅಧಿಕಾರಿಗಳನ್ನು ಕೂಡಿ ಹಾಕಿ ಕಚೇರಿಗೆ ಬೀಗ ಹಾಕಿದ್ದಾರೆ. ರೈತರು ಅನೇಕ ದಿನಗಳಿಂದ ನಾಲೆಗಳಿಗೆ ನೀರು ಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಚುನಾವಣೆಯ ಕೆಲಸ ಇದೆ ಎಂದು ನೆಪ ಹೇಳುತ್ತಾ ನೀರು ಹರಿಸುವುದನ್ನೇ ಮರೆತಿದ್ದಾರೆ.

ನಾಲೆಯ ನೀರನ್ನೇ ನಂಬಿಕೊಂಡು ನೂರಾರು ರೈತರು ಜೀವನ ಸಾಗಿಸುತ್ತಿದ್ದರು. ಇದರಿಂದ ಆಕ್ರೋಶಗೊಂಡ ಅವರು ಅಧಿಕಾರಿಗಳನ್ನು ಕಚೇರಿಯೊಳಗೆ ಕೂಡಿ ಹಾಕಿದ್ದು, ಕೂಡಲೆ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿದ್ದರು.

ಅಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ನೀರು ಬಿಡುವ ದಿನಾಂಕ ತಿಳಿಸುವವರೆಗೂ ಕಚೇರಿಯ ಬೀಗ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಕೊನೆಗೆ ಅಧಿಕಾರಿಗಳು ಬಂದು ಸಮಾಧಾನ ಮಾಡಿ ಕಚೇರಿಯ ಬೀಗ ತೆಗೆಸಿದ್ದಾರೆ.

Comments

Leave a Reply

Your email address will not be published. Required fields are marked *