ರೈತರ ಭೂಮಿ ರೈತರಿಗೆ ಇಲ್ಲ – 6 ಲಕ್ಷದ ಜಮೀನಿಗೆ 70 ಲಕ್ಷ ರೂ. ಕೊಡುವಂತೆ ಬಿಡಿಎ ಡಿಮ್ಯಾಂಡ್!

ಬೆಂಗಳೂರು: ರೈತರ ಸಾಲ ಮನ್ನಾ ಮಾಡೋದು ಇರಲಿ ಸ್ವಾಮಿ, ನಮ್ಮ ಸೈಟ್ ನಮಗೆ ಕೊಟ್ಟುಬಿಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಯೋಜನಾ ನಿರಾರ್ಶಿತ ರೈತರು ದುಂಬಾಲು ಬಿದ್ದಿದ್ದಾರೆ.

ರೈತರೇ ಹೆದರಬೇಡಿ, ನಿಮ್ಮ ಸಾಲವನ್ನು ನಾನು ಮನ್ನಾ ಮಾಡುತ್ತೇನೆ ಎನ್ನುತ್ತಿರುವ ಕುಮಾರಸ್ವಾಮಿ ಅವರು ಬಿಡಿಎ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕಂಡೂ ಕಾಣದಂತೆ ಸುಮ್ಮನಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡಿ ಎಂದು ಪಟ್ಟು ಹಿಡಿದಿದ್ದಾರೆ.

ಬಿಡಿಏ ಭರವಸೆ ಏನು?:
ಬೆಂಗಳೂರು ಸುತ್ತಮುತ್ತ ಲೇಔಟ್‍ಗಳನ್ನು ನಿರ್ಮಾಣ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ರೈತರ ಭೂಮಿಯನ್ನ ಕಡಿಮೆ ಹಣಕ್ಕೆ ಖರೀದಿ ಮಾಡಿತ್ತು. ಒಂದು ಎಕರೆಗೆ ಕೇವಲ 6 ಲಕ್ಷ ದಂತೆ ಅಧಿಕ ಪ್ರಮಾಣದಲ್ಲಿ ಭೂಮಿಯನ್ನು ಖರೀದಿ ಮಾಡಲಾಗಿದ್ದು, ಲೇಔಟ್ ಅಭಿವೃದ್ಧಿ ನಂತರ ರೈತರು ಕೊಟ್ಟ ಜಮೀನಿಗೆ ಅನುಗುಣವಾಗಿ ಸೈಟ್‍ನ್ನು ಸಹ ನೀಡಲಾಗುತ್ತದೆ ಎಂದು ಬಿಡಿಎ ರೈತರಿಗೆ ಭರವಸೆ ನೀಡಿತ್ತು.

ಸದ್ಯ ತನ್ನ ವರಸೆಯನ್ನು ಬದಲಿಸಿಕೊಂಡಿರುವ ಬಿಡಿಎ, ಮಾರುಕಟ್ಟೆ ದರದಲ್ಲಿ ಹಣ ಪಾವತಿಸಿ ಸೈಟ್ ಪಡೆಯಲು ರೈತರಿಗೆ ಸುತ್ತೋಲೆ ಹೊರಡಿಸಿದೆ. ಸುತ್ತೋಲೆ ಪ್ರಕಾರ ಒಂದು ಸೈಟ್ ಅನ್ನು ಪಡೆಯಲು 70 ಲಕ್ಷ ರೂ. ಗಿಂತಲೂ ಅಧಿಕ ಹಣವನ್ನು ನೀಡಬೇಕಾದ ಪರಿಸ್ಥಿತಿ ರೈತರಿಗೆ ಉಂಟಾಗಿದೆ.

ಇತ್ತ ಜಮೀನು ಇಲ್ಲ, ಸೈಟೂ ಇಲ್ಲ. ಹೀಗಾಗಿ ರೈತರು ಕಂಗಾಲಾಗಿದ್ದು, ಬಿಡಿಎನಲ್ಲಿ ಸೈಟ್ ಸಿಗುತ್ತೆ ನಮ್ಮ ಜಮೀನಿನಲ್ಲಿಯೇ ನಾವು ಮನೆ ಕಟ್ಟಿಕೊಳ್ಳಬಹುದು ಎನ್ನುವ ಭರವಸೆ ಇಟ್ಟುಕೊಂಡಿದ್ದ ರೈತರಿಗೆ ಬಿಡಿಎ ತಣ್ಣೀರೆರಚಿದೆ. ಅಧಿಕಾರಿಗಳು ನಮ್ಮ ಜಮೀನು ಖರೀದಿಸುವಾಗ ಇಲ್ಲ ಸಲ್ಲದ ಆಸೆ ತೋರಿಸಿದ್ದರು. ಆದರೆ ಈಗ ತಮಗೆ ಇಷ್ಟ ಬಂದ ಹಾಗೆ ಕಾನೂನು ಮಾಡುತ್ತಿದ್ದಾರೆ. ಬಿಡಿಎ ಅಧಿಕಾರಿಗಳು ಜನಸಾಮಾನ್ಯರಿಗಾಗಿ ಇದ್ದಾರ ಅಥವಾ ರಿಯಲ್ ಎಸ್ಟೇಟ್ ಬ್ರೋಕರ್‍ಗಳಿಗಾಗಿ ಇದ್ದಾರ ಎಂದು ಭೂಮಿ ಕಳೆದುಕೊಂಡ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರ ಒಂದು ಕಡೆ ರೈತರು ಮಾಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಅಂತಾ ಹೇಳುತ್ತಿದೆ. ಆದರೆ ಮತ್ತೊಂದು ಕಡೆ ರೈತರ ಬಳಿ ಲಕ್ಷಾಂತರ ರೂ. ಮೌಲ್ಯದ ಭೂಮಿಯನ್ನು ಸರ್ಕಾರ ಸುಲಿಗೆ ಮಾಡುತ್ತಿದೆ. ಮುಂದೆಯಾದರೂ ರೈತರಿಗೆ ಸುಳ್ಳು ಭರವಸೆಗಳನ್ನ ನೀಡುವುದನ್ನು ಬಿಟ್ಟು ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎನ್ನುವುದೆ ನಮ್ಮ ಆಗ್ರಹ ಎಂದು ರೈತರು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *