ದಿಢೀರ್ ಬೆಲೆ ಕುಸಿತ- ಮಠಗಳಿಗೆ ರೈತರಿಂದ 300 ಮೂಟೆ ಉಚಿತ ಎಲೆಕೋಸು ರವಾನೆ

– 30, 40 ಸಾವಿರ ಖರ್ಚು ಮಾಡಿ ಬೆಳೆದಿದ್ದ ರೈತರು
– 40 ಮಂದಿ ರೈತರಿಂದ ಕೂಲಿಯಿಲ್ಲದೆ ಉಚಿತ ಕಟಾವು

ನೆಲಮಂಗಲ: ದೇಶದ ಬೆನ್ನಲುಬು ರೈತ ಎನ್ನುತ್ತಾರೆ. ಆದರೆ ರೈತರು ಬೆಳೆದ 300 ಚೀಲ ಕೋಸಿಗೆ ಬೆಂಬಲ ಬೆಲೆಯಿಲ್ಲದೆ ಎಲೆಕೋಸನ್ನು ಮಠ ಮಂದಿರಗಳಿಗೆ ಉಚಿತವಾಗಿ ನೀಡಿದ್ದಾನೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಕೆರೆಕತ್ತಿಗನೂರಿನ ರೈತ ಬಾಬು ಮತ್ತು ವಾಸು ಬೆಳೆದ ಎಲೆಕೋಸನ್ನು ಉಚಿತವಾಗಿ ಮಠ-ಮಂದಿರಗಳಿಗೆ ನೀಡುವ ಮೂಲಕ ಸಾರ್ಥಕ ಕಾರ್ಯಕ್ಕೆ ಮುಂದಾಗಿದ್ದಾರೆ. 30 ರಿಂದ 40 ಸಾವಿರ ಖರ್ಚು ಮಾಡಿ ಬೆಳೆದ ಎಲೆಕೋಸಿಗೆ ಬೆಲೆಯಿಲ್ಲಾದಂತಾಗಿದೆ. ಎಲೆಕೋಸಿಗೆ ಮಾರುಕಟ್ಟೆಯಲ್ಲಿ ಚೀಲಕ್ಕೆ 70 ರಿಂದ 80 ರೂಪಾಯಿ. ಈ ಹಿನ್ನೆಲೆಯಲ್ಲಿ ರೈತರ ತಂಡ ಮನಸ್ಸು ಮಾಡಿ, ತುಮಕೂರಿನ ಸಿದ್ದಗಂಗಾ ಮಠ, ಆದಿಚುಂಚನಗಿರಿ ಮಠ, ಯಡಿಯೂರು, ಧರ್ಮಸ್ಥಳಕ್ಕೆ ರವಾನೆ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

ಕೆರೆಕತ್ತಿಗನೂರು ರೈತರ ತಂಡ 300 ಚೀಲ ಎಲೆಕೋಸನ್ನು ಉಚಿತವಾಗಿ ನೀಡಿದ್ದಾರೆ. ಅಲ್ಲದೇ ಎಲೆಕೋಸನ್ನು ಕಟಾವು ಮಾಡಲು ಗ್ರಾಮದ 40 ಮಂದಿ ರೈತರು ಕೂಲಿಯಿಲ್ಲದೇ ಉಚಿತವಾಗಿ ಕೆಲಸ ನಿರ್ವಹಿಸಿದ್ದಾರೆ. ಸ್ಥಳೀಯ ಲಾರಿ ಮಾಲೀಕರೊಬ್ಬರು ಈ ಎಲೆಕೋಸನ್ನು ಸಾಗಿಸುವ ಹೊಣೆ ಹೊತ್ತು ಎಲ್ಲ ಮಠಗಳಿಗೆ ರವಾನೆ ಮಾಡುತ್ತಿದ್ದಾರೆ.

ಅರ್ಧ ಎಕರೆಯಲ್ಲಿ ಮಗುವಿನಂತೆ ಹಾರೈಕೆ ಮಾಡಿರುವ ಎಲೆಕೋಸಿನ ಬೆಳೆ ಅನ್ನದಾತ ವಾಸು ಮತ್ತು ಕುಟುಂಬಕ್ಕೆ ಕೈ ಸುಡುವಂತೆ ಮಾಡಿದೆ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತನ ಬದುಕು ದುಸ್ತಾರವಾಗುತ್ತದೆ. ಬೆಳೆದ ತರಕಾರಿಗಳಿಗೂ ಬೆಂಬಲ ಘೋಷಿಸಿ ಎಂದು ಎಲೆಕೋಸು ಬೆಳೆದ ಬಾಬು ಒತ್ತಾಯಿಸಿದ್ದಾರೆ. ಕೃಷಿ ಇಲಾಖೆ ಆಯಾ ಕಾಲಕ್ಕೆ ತಕ್ಕ ಬೆಳೆ ಬೆಳೆಯಲು ಸೂಕ್ತ ಮಾರ್ಗದರ್ಶನ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

Comments

Leave a Reply

Your email address will not be published. Required fields are marked *