ಸಕ್ಕರೆ ನಾಡಲ್ಲಿ ಜೋಡೆತ್ತಿನ ಅಬ್ಬರ- ಶೋಕಿಗಾಗಿ ಜೋಡೆತ್ತು ಸಾಕಾಣಿಕೆ

ಮಂಡ್ಯ: ಸುಗ್ಗಿ ಹಬ್ಬವೆಂದು ಕರೆಯಲ್ಪಡುವ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮ ಸಕ್ಕರೆ ನಾಡು ಮಂಡ್ಯದಲ್ಲಿ ಮನೆ ಮಾಡಿದೆ. ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬ ರೈತರಿಗೆ ವಿಶೇಷವಾಗಿದ್ದು, ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ರೈತಾಪಿ ವರ್ಗದಲ್ಲಿ ಸಂಭ್ರಮ ನಿರ್ಮಾಣವಾಗಿದೆ.

ರೈತನ ಬೆನ್ನೆಲುಬಾಗಿ ಇಡೀ ವರ್ಷವೆಲ್ಲಾ ದುಡಿದ ಎತ್ತುಗಳಿಗೆ ಇಂದು ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಬೆಳಗ್ಗೆಯೇ ಎತ್ತುಗಳ ಮೈ ತೊಳೆದು, ಸಿಂಗಾರಗೊಳಿಸಿ ಪೂಜೆ ಮಾಡಲಾಗುತ್ತದೆ. ಬಳಿಕ ಸಂಜೆ ಕಿಚ್ಚಾಯಿಸುವ ಮೂಲಕ ರಾಸುಗಳ ಹೇಳಿಗೆಗಾಗಿ ಬಸವಣ್ಣನಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಗುತ್ತದೆ.

ಮಂಡ್ಯ ಜಿಲ್ಲೆಯಾದ್ಯಾಂತ ಹಲವು ರೈತರು ಉಳುಮೆಗಾಗಿ ಎತ್ತುಗಳನ್ನು ಸಾಕಿದರೆ, ಇನ್ನೂ ಕೆಲ ರೈತರು ಶೋಕಿಗಾಗಿಯೇ ಎತ್ತುಗಳನ್ನು ಸಾಕುತ್ತಾರೆ. ಕೆಲವರಿಗೆ ಐಷಾರಾಮಿ ಕಾರುಗಳ ಶೋಕಿ ಹೇಗೆ ಇರುತ್ತೋ ಹಾಗೆ ಮಂಡ್ಯದ ಕೆಲ ರೈತರಿಗೆ ಜೋಡೆತ್ತುಗಳನ್ನು ಸಾಕುವ ಶೋಕಿ ಇದೆ. ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ಎತ್ತುಗಳನ್ನು ಸಾಕಿಕೊಂಡು ರೈತರು ಶೋಕಿ ಮಾಡುತ್ತಾರೆ. ಇಂತಹ ಎತ್ತುಗಳನ್ನು ಉಳುಮೆ ಮಾಡಲು ಬಳಕೆ ಮಾಡಿಕೊಳ್ಳುವುದಿಲ್ಲ. ಇವುಗಳನ್ನು ಶೋಕಿಗಾಗಿ ಮಾತ್ರ ಸಾಕಾಣಿಕೆ ಮಾಡಲಾಗುತ್ತಿದೆ.

ಮಂಡ್ಯದ ಹೊಸಹಳ್ಳಿಯಲ್ಲೂ ಕೂಡ ಜೋಡೆತ್ತುಗಳ ಸಾಕಣಿಗೆ ಹೆಸರುವಾಸಿಯಾಗಿರುವ ಹೊಸಹಳ್ಳಿಯಲ್ಲೂ ಸಹ ಸಂಕ್ರಾಂತಿ ಹಬ್ಬದ ಹಿನ್ನೆಲೆ ಜೋಡೆತ್ತುಗಳ ಭರಾಟೆ ಭರ್ಜರಿಯಾಗಿದೆ. ಪ್ರತಿಷ್ಠೆಗಾಗಿ ಲಕ್ಷಾಂತರ ರೂ. ಹಣವನ್ನು ನೀಡಿ ಜೋಡೆತ್ತುಗಳನ್ನು ಖರೀದಿ ಮಾಡಿದ್ದಾರೆ. ಈ ಎತ್ತುಗಳಿಗೆ ವಿಶೇಷ ಆರೈಕೆ ಮಾಡಲಾಗುತ್ತಿದೆ.

ಇಂದು ಬೆಳಗ್ಗೆ ಜೋಡೆತ್ತುಗಳಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ ಶೃಂಗಾರ ಮಾಡಿದ್ದಾರೆ. ನಂತರ ಬೆಣ್ಣೆ-ತುಪ್ಪ, ಮೊಟ್ಟೆ, ಉದ್ದಿನಕಾಳು, ಹೆಸರುಕಾಳು ಹಾಗೂ ಹುಲ್ಲನ್ನು ತಿನ್ನಿಸಿ ಹಾರೈಕೆ ಮಾಡಲಾಗುತ್ತದೆ. ನಂತರ ಇಂದು ಸಂಜೆಯಲ್ಲಿ ಊರಿನಲ್ಲಿ ಮೆರವಣಿಗೆ ಮಾಡಿ, ಯಾರ ಎತ್ತುಗಳು ಚೆನ್ನಾಗಿ ಇವೆ ಎಂದು ಪ್ರದರ್ಶನ ಮಾಡಲಾಗುತ್ತದೆ. ನಂತರ ಎತ್ತುಗಳನ್ನು ಕಿಚ್ಚಿನಲ್ಲಿ ಹಾರಿಸಲಾಗುತ್ತದೆ. ಬಳಿಕ ಯಾವ ಜೋಡೆತ್ತು ಚೆನ್ನಾಗಿ ಕಾಣುತ್ತವೋ ಅವುಗಳಿಗೆ ಬಹುಮಾನ ನೀಡಲಾಗುತ್ತದೆ.

Comments

Leave a Reply

Your email address will not be published. Required fields are marked *