ಬಡ್ಡಿ ಮನ್ನಾದ ಮೊದ್ಲು ಸಾಲ ಮನ್ನಾ ಮಾಡಿ: ಸಿಎಂಗೆ ಕೋಡಿಹಳ್ಳಿ ಆಗ್ರಹ

ಹಾಸನ: ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಎಲ್ಲ ಬ್ಯಾಂಕಿನಲ್ಲಿ 1 ಲಕ್ಷದವರೆಗಿನ ರೈತರ ಸಾಲಮನ್ನಾ ಮಾಡುತ್ತೇನೆ ಅಂದಿದ್ದರು. ಹೀಗಾಗಿ ಮೊದಲು ಸಾಲಮನ್ನಾ ಮಾಡಿ ಕೊಟ್ಟ ಮಾತು ಉಳಿಸಿಕೊಂಡು ನಂತರ ಬಡ್ಡಿಮನ್ನಾ ಘೋಷಣೆ ಮಾಡಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಆಗ್ರಹಿಸಿದ್ದಾರೆ.

ರೈತರು ಸಹಕಾರಿ ಬ್ಯಾಂಕ್ ಸಾಲದ ಅಸಲನ್ನು ಮಾರ್ಚ್ ಒಳಗೆ ಕಟ್ಟಿದ್ರೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಬಿಎಸ್‍ವೈ ಭಾನುವಾರ ಘೋಷಣೆ ಮಾಡಿದ್ರು. ಈ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಕೋಡಿಹಳ್ಳಿ, ಯಡಿಯೂರಪ್ಪ ರೈತರ ಸಾಲ ವಸೂಲಿಗೆ ಬ್ಯಾಂಕ್ ಸಿಬ್ಬಂದಿಯನ್ನು ಬಿಟ್ಟು ಈಗ ಆದೇಶ ವಾಪಸ್ ಪಡೆದಿದ್ದೇವೆ ಅಂತಾರೆ ಎಂದು ಹೇಳಿದರು. ಇದನ್ನೂ ಓದಿ: ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ: ಸಿಎಂ

ಮಾರ್ಚ್ ಒಳಗೆ ಅಸಲು ಕಟ್ಟಿದ್ರೆ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ ಅಂತ ಯಡಿಯೂರಪ್ಪ ಹೇಳ್ತಾರೆ. ಅವರು ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಎಲ್ಲ ಬ್ಯಾಂಕಿನಲ್ಲಿ 1 ಲಕ್ಷದವರೆಗಿನ ಸಾಲಮನ್ನಾ ಮಾಡುತ್ತೇನೆ ಅಂದಿದ್ದರು. ನೀವು ಕುಮಾರಸ್ವಾಮಿಗೆ ಮುಂಚೆ ಮೂರು ದಿನ ಮುಖ್ಯಮಂತ್ರಿ ಆಗಿದ್ದಾಗ ಅದನ್ನು ಘೋಷಣೆ ಮಾಡಿದ್ರಿ. ಆದರೆ ಈಗ ಆರು ತಿಂಗಳಾದರೂ ಘೋಷಣೆ ಮಾಡಿಲ್ಲ. ಒಂದು ಲಕ್ಷ ಸಾಲಮನ್ನಾ ಮಾಡಿ ಕೊಟ್ಟ ಮಾತನ್ನು ಉಳಿಸಿಕೊಳ್ಳಿ. ನಂತರ ಬಡ್ಡಿಮನ್ನಾದ ಘೋಷಣೆ ಮಾಡಿ ಎಂದು ಆಗ್ರಹಿಸಿದ್ದಾರೆ.

ನಾವಿರುವ ಪರಿಸ್ಥಿತಿಯಲ್ಲಿ ಅಸಲು ಕಟ್ಟಲು ಸಾಧ್ಯವಿಲ್ಲ. ರಾಜ್ಯದಲ್ಲಿ ಪ್ರವಾಹ ಬಂದು ಬೀದಿಪಾಲಾಗಿರುವವರಲ್ಲಿ ನೀವು ಸಾಲ ವಾಪಸ್ ಕೇಳುತ್ತೀರಿ. ರೈತರಿಗೆ ಸ್ವಾಮಿನಾಥನ್ ವರದಿ ಪ್ರಕಾರ ಯೋಗ್ಯ ಬೆಲೆ ಕೊಟ್ಟರೆ ಸಾಲ ಕೇಳಲು ನಿಮಗೆ ನೈತಿಕತೆ ಇದೆ ಎಂದು ಚಂದ್ರಶೇಖರ್ ಆಕ್ರೋಶ ಹೊರಹಾಕಿದ್ದಾರೆ.

Comments

Leave a Reply

Your email address will not be published. Required fields are marked *