ಸಾರ್ವಜನಿಕ ಶೌಚಾಲಯದಲ್ಲೇ ಸಂಸಾರ – ಹಾಸನ ಜಿಲ್ಲೆಯಲ್ಲೊಂದು ಮನಕಲಕುವ ಘಟನೆ

ಹಾಸನ: ಸಾರ್ವಜನಿಕೆ ಶೌಚಾಲಯ ಅಂದ್ರೆ ಸಾರ್ವಜನಿಕರೇ ಮೂಗು ಮುಚ್ಚಿಕೊಳ್ಳುವ ಸ್ಥಳ. ಆದ್ರೆ ಅಂತಹ ಸ್ಥಳದಲ್ಲಿ ಒಂದು ಸಂಸಾರ ಜೀವನ ನಡಿಸ್ತಿದೆ ಅಂದ್ರೆ ನಂಬಲು ಸಾಧ್ಯವೇ. ರಸ್ತೆಯ ಪಕ್ಕದಲ್ಲೇ ಇರುವ ಸಾರ್ವಜನಿಕ ಶೌಚಾಲಯ ಕಟ್ಟಡದಲ್ಲಿ ಇದೀಗ ದೂರದ ಕೊಪ್ಪಳದಿಂದ ವಲಸೆ ಬಂದಿರೋ ಕುಟುಂಬಕ್ಕೆ ಮನೆಯಾಗ್ಬಿಟ್ಟಿದೆ. ವಿಚಿತ್ರ ಅನ್ನಿಸಿದ್ರೂ ಇದು ಸತ್ಯ.


ಕೊಪ್ಪಳ ಜಿಲ್ಲೆಯ ಗಂಗಾವತಿಯ ರಮೇಶ್ ತಮ್ಮ ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಕೋಟೆ ಬಡಾವಣೆಯಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲೇ ವಾಸಿಸುತ್ತಿದ್ದಾರೆ. ಇದು ಪಶುಸಂಗೋಪನಾ ಸಚಿವ ಎ.ಮಂಜು ಪ್ರತಿನಿಧಿಸುವ ಕ್ಷೇತ್ರ ಕೂಡಾ ಹೌದು. ಈ ಬಗ್ಗೆ ವರದಿಗಾಗಿ ಪಬ್ಲಿಕ್ ಟಿವಿ ಸ್ಥಳಕ್ಕೆ ತೆರಳಿದೆ ಅಂತಾ ಗೊತ್ತಾಗಿದ್ದೇ ತಡ ಪಟ್ಟಣ ಪಂಚಾಯತಿ ಅಧಿಕಾರಿಗಳು ಏಕಾಏಕಿ ಕುಟುಂಬವನ್ನು ಶೌಚಾಲಯದಿಂದ ಹೊರಹಾಕಿದ್ದಾರೆ.


ಪ್ರಭಾವಿ ಸಚಿವರ ಕ್ಷೇತ್ರದಲ್ಲೇ ಈ ಹಣೆಬರಹವಾದ್ರೆ ಇನ್ನು ಉಳಿದ ಕ್ಷೇತ್ರಗಳಲ್ಲಿನ ಜನರ ಕಥೆ ಏನು ಅನ್ನೋದು ಜನಸಾಮಾನ್ಯರ ಪ್ರಶ್ನೆಯಾಗಿದೆ. ಸೂರಿಗೆ ಬೇಡಿಕೆ ಇಟ್ಟರೂ ವಸತಿ ಯೋಜನೆಯಡಿ ಮನೆ ನೀಡಲಾಗದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮ್ಮಲ್ಲಿದ್ದಾರೆ ಅಂದ್ರೆ ನಿಜಕ್ಕೂ ವಿಷಾಧನೀಯ ಸಂಗತಿಯಾಗಿದೆ.

Comments

Leave a Reply

Your email address will not be published. Required fields are marked *