ಅಕ್ರಮವಾಗಿ ಗುರುತಿನ ಚೀಟಿ ಮುದ್ರಣ ಆರೋಪ – ಕಾಂಪ್ಲೆಕ್ಸ್ ಮೇಲೆ ದಾಳಿ, 16 ಮಂದಿ ವಶಕ್ಕೆ

ಬೆಂಗಳೂರು: ಕೆಜೆ ರಸ್ತೆಯಲ್ಲಿರುವ ಪ್ರಭಾತ್ ಕಾಂಪ್ಲೆಕ್ಸ್ ನಲ್ಲಿ ಅಕ್ರಮವಾಗಿ ಗುರುತಿನ ಚೀಟಿ ತಯಾರಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಸೋಮವಾರ ರಾತ್ರಿ ಜಂಟಿಯಾಗಿ ದಾಳಿ ಮಾಡಿದ್ದಾರೆ.

ಈ ವೇಳೆ ವಕೀಲ ಇಬ್ರಾಹಿಂ  ಸೇರಿ 16 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರಿಂದ ವೋಟರ್ ಲಿಸ್ಟ್ ಹಾಗೂ ಪ್ರಿಂಟರ್ಸ್ ಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಸಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆಯ ಆರೋಪಿಗಳು ಕೇಂದ್ರ ಲೋಕಸಭಾ ಕ್ಷೇತ್ರದ ಮತದಾರರ ಸರ್ವೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಸರ್ವೆಯಲ್ಲಿ ಒಂದಷ್ಟು ಮತದಾರರು ಕೇಂದ್ರ ಲೋಕಸಭಾ ಕ್ಷೇತ್ರ ಬಿಟ್ಟು ಹೋಗಿದ್ದಾರೆ. ಕ್ಷೇತ್ರ ಬಿಟ್ಟು ಹೋಗಿರುವವರ ಪಟ್ಟಿ ಮಾಡಿ ಅವರನ್ನು ಕರೆ ತಂದು ವೋಟಿಂಗ್ ಮಾಡುವ ಪ್ಲಾನ್ ಮಾಡಿಕೊಂಡಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.

ಬೆಂಗಳೂರು ಕೇಂದ್ರ ಕ್ಷೇತ್ರದ ಅಭ್ಯರ್ಥಿ ಪಿಸಿ ಮೋಹನ್ ಅವರನ್ನು ಸೋಲಿಸಲು ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ನಕಲಿ ವೋಟರ್ ಐಡಿ ಮುದ್ರಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಆರೋಪಕ್ಕೆ ಪ್ರತಿಯಾಗಿ ಕಾಂಗ್ರೆಸ್, ಪಿಸಿ ಮೋಹನ್ ಅವರು ಸೋಲಿನ ಭಯದಿಂದ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಕೂಡ ಅಭ್ಯರ್ಥಿಯ ಕಲರ್ ಪೋಟೋ ಅಂಟಿಸಿ ಮತದಾರರಿಗೆ ಹಂಚುತ್ತಿದ್ದಾರೆಂದು ಆರೋಪಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

Comments

Leave a Reply

Your email address will not be published. Required fields are marked *