ಬಳ್ಳಾರಿ ವಿವಿ ನೇಮಕಾತಿಯಲ್ಲಿ ಅಕ್ರಮದ ವಾಸನೆ – ವರದಿ ಮಾಡಿದ್ದಕ್ಕೆ ಪಬ್ಲಿಕ್ ಟಿವಿ ಮೇಲೆ ಕೇಸ್

ಬೆಂಗಳೂರು: ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿ ಅಕ್ರಮದ ಬಗ್ಗೆ ವರದಿ ಮಾಡಿದಕ್ಕೆ ಪಬ್ಲಿಕ್ ಟಿವಿಯ ಬಳ್ಳಾರಿ ವರದಿಗಾರ ವೀರೇಶ್ ದಾನಿ ವಿರುದ್ಧ ಸುಳ್ಳು ಕೇಸ್ ದಾಖಲಿಸಿ, ಬಲವಂತವಾಗಿ ವಿಚಾರಣೆ ನಡೆಸಲಾಗಿದೆ.

ಹೌದು. ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿ ಅಕ್ರಮದ ಬಗ್ಗೆ ವರದಿ ಮಾಡಿದ್ದೇ ತಪ್ಪಾ? ಪರೀಕ್ಷಾ ಹಾಲ್ ಟಿಕೆಟ್‍ನಲ್ಲಿನ ಲೋಪದೋಷ ಪ್ರಶ್ನಿಸಿದ್ದೇ ತಪ್ಪಾ ಎಂಬ ಪ್ರಶ್ನೆ ಸದ್ಯ ಹುಟ್ಟುಕೊಂಡಿದೆ. ಯಾಕೆಂದರೆ ವಿವಿ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವರದಿ ಪ್ರಸಾರ ಮಾಡಿದ್ದಕ್ಕೆ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ. ಅಲ್ಲದೆ ರಾತ್ರೋರಾತ್ರಿ ವರದಿಗಾರನ ಮನೆಗೆ ಬಂದು ಪೊಲೀಸರು ದರ್ಪ ಮೆರೆದಿದ್ದಾರೆ. ಹಾಗೆಯೇ ಬಲವಂತವಾಗಿ ವಿಚಾರಣೆ ಕೂಡ ನಡೆಸಿದ್ದಾರೆ.

ಏನಿದು ಪ್ರಕರಣ?
ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಪರೀಕ್ಷೆಯ ನಡೆದಿತ್ತು. ಈ ಪರೀಕ್ಷೆಯ ಹಾಲ್ ಟಿಕೆಟ್‍ನಲ್ಲಿ ಅಭ್ಯರ್ಥಿಗಳ ಫೋಟೋ ಇರುವ ಜಾಗದಲ್ಲಿ ಖಾಲಿ ಜಾಗವನ್ನು ಬಿಡಲಾಗಿತ್ತು. ಸರ್ಕಾರಿ ಹುದ್ದೆಗೆ ನಡೆಯುವ ಪರೀಕ್ಷೆಗಳ ಹಾಲ್ ಟಿಕೆಟ್ ಗಳು ಫೋಟೋದೊಂದಿಗೆ ಮುದ್ರಣವಾಗುತ್ತದೆ. ಆದರೆ ಈ ಪರೀಕ್ಷೆಯ ಹಾಲ್ ಟಿಕೆಟ್‍ನಲ್ಲಿ ಅಭ್ಯರ್ಥಿಗಳೇ ಫೋಟೋ ಅಂಟಿಸಬೇಕಿತ್ತು. ಈ ರೀತಿಯ ಪರೀಕ್ಷೆಯಲ್ಲಿ ಅಭ್ಯರ್ಥಿ ಯಾರೋ ಪರೀಕ್ಷೆ ಬರೆಯುವವರು ಯಾರೋ ಆಗುವ ಸಾಧ್ಯತೆ ಇರುತ್ತದೆ. ಪರೀಕ್ಷಾ ಕೊಠಡಿ ಮೇಲ್ವಿಚಾರಕಾರಿಗೆ ಸಹ ಖಚಿತವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಆದರೆ ಈಗ ವರದಿ ಮಾಡಿ ಪ್ರಶ್ನಿಸಿದ್ದನ್ನೇ ಮುಂದಿಟ್ಟುಕೊಂಡು ಪಬ್ಲಿಕ್ ಟಿವಿ ವರದಿಗಾರನ ವಿರುದ್ಧವೇ ಕೇಸ್ ದಾಖಲಾಗಿದೆ.

ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಪರೀಕ್ಷೆಯ ಹಾಲ್ ಟಿಕೆಟ್‍ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ರಾಜ್ಯಪಾಲ ವಜೂಭಾಯಿ ವಾಲಾರ ಫೋಟೋಗಳಿರುವುದು ಕಂಡುಬಂದಿದೆ. ಇವರ ಫೋಟೋ ಇದ್ದು ಇವರೇ ಪರೀಕ್ಷೆ ಬರೆದರ ಅನ್ನೋ ಅನುಮಾನ ಮೂಡುತ್ತಿದೆ ಎಂದು ಹೋರಾಟಗಾರ ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ್ದರು.

ವಿವಿ ನೇಮಕಾತಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಪಡೆದು ನೇಮಕಾತಿ ಮಾಡಲಾಗುತ್ತಿದೆ ಅನ್ನೋ ಆರೋಪವಿದೆ. ಇದೀಗ ಪರೀಕ್ಷಾರ್ಥಿಗಳ ಹಾಲ್ ಟಿಕೆಟ್‍ನಲ್ಲಿ ಸ್ವತಃ ಸಿಎಂ ಕುಮಾರಸ್ವಾಮಿ ಹಾಗೂ ರಾಜ್ಯಪಾಲರ ಫೋಟೋ ಪ್ರತ್ಯಕ್ಷವಾದ್ರೂ ವಿವಿ ಆಡಳಿತ ಮಂಡಳಿ ತನಗೇನು ಸಂಬಂಧವಿಲ್ಲದಂತೆ ವರ್ತಿಸುತ್ತಿದೆ ಎಂದು ವರದಿ ಮಾಡಲಾಗಿತ್ತು.

Comments

Leave a Reply

Your email address will not be published. Required fields are marked *