ಸ್ಟೀಮ್ ಅಕ್ಕಿ ತಯಾರಿಕೆಗೆ ಬಳಸಿದ ರಾಸಾಯನಿಕ ನೀರನ್ನ ಹಳ್ಳಕ್ಕೆ ಬಿಡ್ತಿರೋ ಕಾರ್ಖಾನೆ- ಜಾನುವಾರುಗಳ ಸಾವು, ಬೆಳೆ ಹಾನಿ

ರಾಯಚೂರು: ಜಿಲ್ಲೆಯ ಜನರಿಗೆ ಅದ್ಯಾಕೋ ನೆಮ್ಮದಿ ಅನ್ನೋದೇ ಸಿಗುತ್ತಿಲ್ಲ. ಮಳೆ ಬರಲ್ಲ, ಅಪ್ಪಿತಪ್ಪಿ ಬಂದ್ರೆ ಪ್ರವಾಹ. ನೆಮ್ಮದಿಯಾಗಿ ಬದುಕೋಣ ಅಂದ್ರೆ ಒಳ್ಳೆಯ ಗಾಳಿ ಕೂಡ ಸಿಗುತ್ತಿಲ್ಲ. ಯಾಕಂದ್ರೆ ವಿಷ ಹೊರಹಾಕುವ ಕಂಪನಿಗಳು ಜನರ ಜೀವ ತೆಗೆಯುತ್ತಿವೆ.

ರಾಯಚೂರು-ಹೈದರಾಬಾದ್ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳು ಮಾಡುವ ಪರಿಸರ ಮಾಲಿನ್ಯವನ್ನು ಪ್ರಶ್ನೆ ಮಾಡುವವರೇ ಇಲ್ಲ. ಈ ಹಿಂದೆ ಶಿಲ್ಪಾ ಫಾರ್ಮಾಸಿಟಿಕಲ್ ಫ್ಯಾಕ್ಟರಿಯ ನಿರ್ಲಕ್ಷ್ಯದ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಆದರೂ ಕಾರ್ಖಾನೆಗಳ ಆಟಾಟೋಪಕ್ಕೆ ಬ್ರೇಕ್ ಬಿದ್ದಿಲ್ಲ.

ಯರಮರಸ್ ಬಳಿಯ ಮಂಚುಕೊಂಡ ಆಗ್ರೋಟೆಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ಸ್ಟೀಮ್ ಅಕ್ಕಿ ತಯಾರಿಕೆಗೆ ಬಳಸಿದ ರಾಸಾಯನಿಕ ನೀರನ್ನು ನೇರವಾಗಿ ಚಿಕ್ಕಸುಗೂರು ಹಳ್ಳಕ್ಕೆ ಬಿಡುತ್ತಿದೆ. ವಿಷದ ನೀರನ್ನು ಕುಡಿಯುವ ಎತ್ತು, ಎಮ್ಮೆ, ಕುರಿಗಳು ಸಾವನ್ನಪ್ಪುತ್ತಿವೆ. ಸುತ್ತಮುತ್ತಲಿನ ಜನರು ನಾನಾ ಚರ್ಮ ರೋಗಕ್ಕೆ ತುತ್ತಾಗಿದ್ದಾರೆ. ವಿಷದ ನೀರಿಗೆ ರೈತರು ಬೆಳೆದ ಹತ್ತಿ, ಮೆಣಸಿನಕಾಯಿ ಬೆಳೆ ಬಾಡಿ ಹೋಗಿವೆ.

ಕಾರ್ಖಾನೆಗಳ ವಿರುದ್ಧ ಗ್ರಾಮಸ್ಥರು ಎಷ್ಟೇ ಹೋರಾಟ ಮಾಡಿದರೂ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೇವಲ ನೋಟಿಸ್ ಕೊಟ್ಟು ಸುಮ್ಮನಾಗಿದೆ. ಈ ಬಗ್ಗೆ ಶಾಸಕರನ್ನು ಪ್ರಶ್ನಿಸಿದರೆ ಅವರು ತೇಪೆ ಹಚ್ಚುವ ಸ್ಟೇಟ್‍ಮೆಂಟ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಕಾರ್ಖಾನೆಗಳಿಂದಾಗಿ ರಾಯಚೂರಿನ ಜನರಿಗೆ ಶುದ್ಧ ನೀರು, ಶುದ್ಧ ಗಾಳಿ ಅನ್ನೋದು ಮರೀಚಿಕೆಯಾಗಿದೆ.

 

Comments

Leave a Reply

Your email address will not be published. Required fields are marked *