ಜಿ.ಪಂ ಮಾಜಿ ಸದಸ್ಯರ ಮಗ & ಗ್ಯಾಂಗ್ ನಿಂದ ದರ್ಪ- ಯುವಕನ ಕೈ ಕಟ್ಟಿ ಕಬ್ಬಿಣದ ರಾಡ್ ನಿಂದ ಹಲ್ಲೆ

ಕೊಪ್ಪಳ: ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರ ಮಗ ಹಾಗೂ ಆತನ ಗ್ಯಾಂಗ್ ಯುವಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಗಿಣಗೇರಿ ಗ್ರಾಮದ ಮಾಜಿ ಜಿಪಂ ಸದಸ್ಯ ಮಾರುತೆಪ್ಪ ಹಲಗೇರಿ ಅವರ ಮಗ ವಿಜಯ್ ಹಾಗೂ ಆತನ ಸ್ನೇಹಿತರಾದ ಶಿವು ಮತ್ತು ಪರುಶುರಾಮ್ ಸೇರಿದಂತೆ 15 ಜನರ ತಂಡ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಆರೋಪ ಕೇಳಿಬಂದಿದೆ. ಕೊಪ್ಪಳ ತಾಲೂಕಿನ ಕನಕಾಪುರ ಗ್ರಾಮದ ಗಣೇಶ್ ನನ್ನು 3 ಗಂಟೆಗಳ ಕಾಲ ಕಟ್ಟಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ.

ಗಣೇಶ್ ಗಿಣಗೇರಿಯ ಮೊಬೈಲ್ ಅಂಗಡಿಗೆ ಹೋದಾಗ ವಿಜಯ್ ಮತ್ತು ತಂಡದವರು ಆತನನ್ನು ಬೈಕ್ ಮೇಲೆ ಹೊತ್ತೊಯ್ದು ಜಮೀನೊಂದರಲ್ಲಿ ಕೈ ಕಟ್ಟಿ ಹಾಕಿ ಕಬ್ಬಿಣದ ರಾಡ್ ನಿಂದ ಥಳಿಸಿದ್ದಾರೆ. ಪರಿಣಾಮ ಗಣೇಶ ಗೆ ಎರಡು ಕೈಗಳು ಮುರಿದು ಹೋಗಿವೆ. ಈ ಘಟನೆಗೆ ಹಳೇ ದ್ವೇಷವೇ ಕಾರಣ ಎನ್ನಲಾಗುತ್ತಿದೆ. ಎಂಟು ತಿಂಗಳ ಹಿಂದೆ ನಡೆದ ಕಬಡ್ಡಿ ಪಂದ್ಯಾಟ ಇದಕ್ಕೆಲ್ಲ ಕಾರಣ ಎಂದು ತಿಳಿದುಬಂದಿದೆ. ಮೂರು ಗಂಟೆಗಳ ಕಾಲ ದರ್ಪ ಮಾಡಿದ ತಂಡ ತದನಂತರ ಗಣೇಶನನ್ನು ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಗೆ ಬಂದ ಗಣೇಶ್ ಸಂಬಂಧಿಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಬಟ್ಟೆ ಬಿಚ್ಚಿ ಆರೋಪಿಗಳನ್ನು ಬಂಧಿಸುವಂತೆ ಆಸ್ಪತ್ರೆಯ ಮುಂದೆ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದ್ದಾರೆ.

ಘಟನೆ ಸಂಬಂಧ ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *