ರಾಷ್ಟ್ರಪತಿ ರೇಸಲ್ಲಿ ಮಣ್ಣಿನ ಮಗ ದೇವೇಗೌಡ್ರ ಹೆಸರು- ಗೌಡ್ರಿಗೆ ಒಲಿಯುತ್ತಾ ಪ್ರಥಮ ಪ್ರಜೆ ಪಟ್ಟ?

ಬೆಂಗಳೂರು: ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರಿಗೆ ರಾಷ್ಟ್ರಪತಿ ಹುದ್ದೆ ಒಲಿದು ಬರುತ್ತಾ? ಇಂತಹ ಒಂದು ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಎನ್‍ಡಿಎ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಬೆಂಬಲದೊಂದಿಗೆ ದೇವೇಗೌಡರನ್ನ ಸರ್ವಸಮ್ಮತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂಬ ಸುದ್ದಿ ದೆಹಲಿ ಮಟ್ಟದಲ್ಲಿ ವ್ಯಾಪಕವಾಗಿದೆ.

ಇಂತಹ ಒಂದು ಸುದ್ದಿ ಹಿಂದೊಮ್ಮೆ ಬಂದಾಗ ದೇವೇಗೌಡರು ರಾಷ್ಟ್ರಪತಿ ಅಭ್ಯರ್ಥಿ ಆಗುವ ಸಾಧ್ಯತೆಯನ್ನ ಸಾರಾಸಗಟಾಗಿ ತಳ್ಳಿಹಾಕಿದ್ರು. ಹಾಗಿದ್ದರೂ ಕೂಡ ದೇವೇಗೌಡರನ್ನ ಎನ್‍ಡಿಎ ವಿರುದ್ಧ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಆಶಯವನ್ನ ಬಿಜೆಪಿ ವಿರೋಧಿ ಗುಂಪು ರಾಷ್ಟ್ರಮಟ್ಟದಲ್ಲಿ ವ್ಯಕ್ತಪಡಿಸುತ್ತಿದೆ. ದೇವೇಗೌಡರು ಒಪ್ಪದಿದ್ದರೆ ಜೆಡಿಯು ಮುಖಂಡ ಶರದ್ ಯಾದವ್‍ರನ್ನ ಕಣಕ್ಕಿಳಿಸುವ ಸಾಧ್ಯತೆಯಿದೆ.

ಈ ಬಗ್ಗೆ ಈಗಾಗಲೇ ಎಡರಂಗ ಹಾಗೂ ಜನತಾ ಪರಿವಾರದ ಮುಖಂಡರು ಸೋನಿಯಾ ಗಾಂಧಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮತ್ತೊಮ್ಮೆ ಕಣಕ್ಕಿಳಿಯಲು ಒಪ್ಪಿದ್ರೆ ಅವರನ್ನೇ ಅಭ್ಯರ್ಥಿಯಾಗಿ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

Comments

Leave a Reply

Your email address will not be published. Required fields are marked *