ಪರಿವಾರದಿಂದ ಹೊರ ಹೋದವರೆಲ್ಲರೂ ಪಕ್ಷಕ್ಕೆ ವಾಪಸ್ಸಾಗಬೇಕು- ಎಚ್ ವಿಶ್ವನಾಥ್

ಬೆಂಗಳೂರು: ಜನತಾ ಪಕ್ಷ ಬಿಟ್ಟಿರುವ ಎಲ್ಲರೂ ಪಕ್ಷಕ್ಕೆ ವಾಪಸ್ ಆಗಬೇಕು. ಜನತಾ ಪರಿವಾರದಿಂದ ಹೊರ ಹೋದವರನ್ನ ವಾಪಸ್ ಬರುವಂತೆ ಮನವಿ ಮಾಡ್ತೀನಿ. ಜೆಡಿಎಸ್ ಪಕ್ಷ ಬೆಳವಣಿಗೆಗೆ ಎಲ್ಲರೂ ಒಗ್ಗೂಡಿಸೋದು ನನ್ನ ಕೆಲಸ ಅಂತ ಹುಣೂಸುರು ಶಾಸಕ ಎಚ್ ವಿಶ್ವನಾಥ್ ತಿಳಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ದೊಡ್ಡ ಜವಾಬ್ದಾರಿ ವರಿಷ್ಠರು ಕೊಟ್ಟಿದ್ದಾರೆ. ಅದನ್ನ ನಿಭಾಯಿಸಲು ಶಕ್ತಿ ನೀಡುವಂತೆ ದೇವರಲ್ಲಿ ಬೇಡಿಕೊಂಡಿದ್ದೇನೆ. ಸಿಎಂ ಆಗಿ ಕುಮಾರಸ್ವಾಮಿ ಆದಾಗಿನಿಂದ ರಾಜ್ಯಾದ್ಯಂತ ಹೆಚ್ಚು ಮಳೆ ಆಗಿದೆ ಅಂದ್ರು.

ರಾಜಕೀಯವಾಗಿ ಜರ್ಜರಿತವಾದಾಗ ದೇವೇಗೌಡರು, ಕುಮಾರಸ್ವಾಮಿ ನನಗೆ ಅವಕಾಶ ನೀಡಿದ್ರು. ಹುಣಸೂರಿನಿಂದ ಟಿಕೆಟ್ ನೀಡಿ ಗೆಲ್ಲಿಸಿದ್ರು. ಈಗ ನನ್ನ ಮೇಲೆ ಅಭಿಮಾನವಿಟ್ಟು ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ. ರಾಜ್ಯದ ಜವಾಬ್ದಾರಿ ನನಗೆ ನೀಡಿದ್ದಾರೆ. ಮುಂದೆ ಸ್ಥಳೀಯ ಸಂಸ್ಥೆ, ಲೋಕಸಭೆ ಚುನಾವಣೆ ಇದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೊಸ ರೂಪ ನೀಡುತ್ತೇನೆ. ಪಕ್ಷ ಬಿಟ್ಟಿರುವ ಎಲ್ಲಾ ನಾಯಕರು ಪಕ್ಷಕ್ಕೆ ವಾಪಸ್ ಕರೆದುಕೊಂಡು ಬರುತ್ತೇವೆ. ರಾಜ್ಯದ ಅಭಿವೃದ್ಧಿಗೆ ಹೋದವರು ವಾಪಸ್ ಪಕ್ಷಕ್ಕೆ ಬರಬೇಕು ಅಂತ ಹೇಳಿದ್ರು.

ಬಿಜೆಪಿಗೆ ತಿರುಗೇಟು:
ಮಾತೋಡೋರಿಗೆ ಬೇಡ ಅನ್ನೋಕೆ ಆಗೊಲ್ಲ. ಪ್ರಜಾಪ್ರಭುತ್ವದಲ್ಲಿ ಮಾತನಾಡೋದಕ್ಕೆ ಅವಶ್ಯಕತೆ. ಆದ್ರೆ ರಾಷ್ಟ್ರೀಯ ಪಕ್ಷದ ನಾಯಕರು ಹೇಗೆ ಮಾತನಾಡಬೇಕು ಅನ್ನೋದು ತಿಳಿದುಕೊಳ್ಳಬೇಕು ಅಂತ ಸೂಪರ್ ಸಿಎಂ, ಸುಪ್ರೀಂ ಸಿಎಂ ಎಂಬ ಬಿಜೆಪಿ ಟ್ವಿಟ್ ಗೆ ತಿರುಗೇಟು ನೀಡಿದ್ರು.

ದೇವೇಗೌಡರು ಸರ್ಕಾರದ ಫೈಲ್ ನೋಡ್ತಿಲ್ಲ ಅನ್ನೋ ವಿಚಾರದ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇವೇಗೌಡರು ದೇಶದ ಪ್ರಧಾನಿ ಆದವರು. ರಾಜಕೀಯ ಅನುಭವ ಅವರಿಗೆ ಹೆಚ್ಚಿದೆ. ಅವರ ರಾಜಕೀಯ ಅನುಭವದಲ್ಲಿ ಸಲಹೆ ಪಡೆದ್ರೆ ಏನು ತಪ್ಪು ಅಂತ ಪ್ರಶ್ನಿಸಿದ್ರು.

ಬಾಲಿಶವಾಗಿ ಬಿಜೆಪಿ ಅವರು ನಡೆದುಕೊಳ್ಳಬಾರದು. ಯಡಿಯೂರಪ್ಪ ಅವರು ಸುಮ್ಮನೆ ಮಾತನಾಡಬಾರದು. ಜನರು ಒಪ್ಪಿ ಸಮ್ಮಿಶ್ರ ಸರ್ಕಾರ ಆಗಿದೆ. ಸೇವೆಗಾಗಿ ನಾವು ಇಬ್ಬರೂ ವೋಟ್ ಕೇಳಿದ್ದೇವೆ. ಜಗಳ ಮಾಡ್ತೀವಿ ಅಂತ ವೋಟ್ ಕೇಳಿಲ್ಲ. ಜನತಾಂತ್ರಿಕವಾಗಿ ಎಲ್ಲರು ಕೆಲಸ ಮಾಡೋಣ. ಯಡಿಯೂರಪ್ಪ, ಅವರ ಪಕ್ಷದ ನಾಯಕರು ನಮ್ಮ ಜೊತೆ ಕೈ ಜೋಡಿಸಬೇಕು. ಸಾಲಮನ್ನಾ ವಿಚಾರದಲ್ಲಿ ವಿಪಕ್ಷಗಳು ಗೊಂದಲ ಮೂಡಿಸುತ್ತಿವೆ. ಸಹಕಾರಿ ಬ್ಯಾಂಕ್ ನ ಸಾಲಮನ್ನಾ ಕುರಿತು ಆದೇಶ ಆಗುತ್ತಿದೆ. ರಾಷ್ಟ್ರೀಯ ಬ್ಯಾಂಕ್ ಗಳ ಸಾಲಮನ್ನಾ ಕೂಡಾ ಆದಷ್ಟು ಬೇಗ ಆದೇಶ ಆಗುತ್ತೆ. ಯಾರು ಸುಮ್ಮನೆ ಗೊಂದಲ ಸೃಷ್ಟಿ ಮಾಡಬಾರದು ಅಂತ ಸ್ಪಷ್ಟಪಡಿಸಿದ್ರು.

ಕಾರ್ಯಕರ್ತರಿಗೆ ಶರವಣ ಕರೆ:
ಸಿಎಂ ಕುಮಾರಸ್ವಾಮಿ 18 ಗಂಟೆ ಕೆಲಸ ಮಾಡ್ತಿದ್ದಾರೆ. ಇಡೀ ರಾಜ್ಯ ನಮ್ಮನ್ನ ನೋಡುತ್ತಿದೆ. ಪಕ್ಷದ ಕಾರ್ಯಕರ್ತರು ಮುಂದಿನ ಚುನಾವಣೆಗೆ ರೆಡಿಯಾಗಬೇಕು. ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಎಲ್ಲಾ ಶ್ರಮ ವಹಿಸಬೇಕು ಅಂತ ಪರಿಷತ್ ಸದಸ್ಯ ಶರವಣ ಕರೆ ನೀಡಿದ್ರು.

ದೇವಾಲಯ, ಜೆಡಿಎಸ್ ವರಿಷ್ಠರ ಭೇಟಿ:
ಅಧಿಕಾರ ಸ್ವೀಕಾರಕ್ಕೂ ವಿಶ್ವನಾಥ್ ಅವರು, ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನ ನಂತರ ಗವಿ ಗಂಗಾಧರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಸ್ಥಾನಕ್ಕೆ ಆಗಮಿಸುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದ್ದರು. ಈ ವೇಳೆ ವಿಶ್ವನಾಥ್ ಗೆ ಪರಿಷತ್ ಸದಸ್ಯ ಶರವಣ ಸಾಥ್ ನೀಡಿದ್ರು. ಬಳಿಕ ಅವರು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಆ ನಂತರ ಜೆಡಿಎಸ್ ಕಚೇರಿಯಲ್ಲಿ ಎಚ್.ವಿಶ್ವನಾಥ್ ಅವರು ನೂತನ ರಾಜ್ಯಾಧ್ಯಕ್ಷರಾಗಿ ಅಧಿಕೃತವಾಗಿ ಕೆಲಸ ಆರಂಭಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Comments

Leave a Reply

Your email address will not be published. Required fields are marked *