BJP ಹೆಣದ ರಾಶಿ ಮೇಲೆ ರಾಜಕೀಯ ಮಾಡಿ ಲಾಭ ಪಡೆದುಕೊಳ್ಳುವ ಸಂಚು ಮಾಡ್ತಿದೆ: ಈಶ್ವರ್ ಖಂಡ್ರೆ

ಬೀದರ್: ಬಿಜೆಪಿಯವರು ಮುಗ್ಧ ಯುವಕರ ಹಾಗೂ ಜನರ ಹೆಣದ ರಾಶಿ ಮೇಲೆ ರಾಜಕೀಯ ಮಾಡಿ ಲಾಭ ಪಡೆದುಕೊಳ್ಳುವ ಸಂಚು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿ ಸರ್ಕಾರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೀದರ್ ನಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಂದ್ರು ಕೊಲೆ ಕೇಸ್ ಸಿಐಡಿಗೆ ಕೊಡಲು ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಈಶ್ವರ್ ಖಂಡ್ರೆ ರಾಜ್ಯದಲ್ಲಿ ಇಂದು ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಆದರೆ ಇಂದು ಬೇಲಿಯೇ ಎದ್ದು ಹೋಲ ಮೇಯೋ ಕೆಲಸ ಆರಗ ಜ್ಞಾನೇಂದ್ರ ಮಾಡುತ್ತಿದ್ದಾರೆ. ಚಂದ್ರು ಕೊಲೆ ಕೇಸ್‌ನಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ನಿಜವಾಗಿಯೂ ಇದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ.

ಕೊಲೆ ಮಾಡಿದ ಕೊಲೆಗಡುಕರನ್ನು ತಕ್ಷಣವೇ ಬಂಧಿಸಬೇಕು ಹಾಗೂ ಕಠಿಣ ಶಿಕ್ಷೆ ಕೊಡಿಸೋದು ಗೃಹ ಸಚಿವರ ಕರ್ತವ್ಯ. ಆದರೆ ಇದನ್ನು ಬಿಟ್ಟು ಇಂದು ಆಧಾರ ರಹಿತ ಹೇಳಿಕೆ ಕೊಟ್ಟು ಜನರನ್ನು ದಾರಿ ತಪ್ಪಿಸುವುದು ಹಾಗೂ ಕೋಮು ಭಾವನೆ ಕೇರಳಿಸುವಂತಾ ಕೆಲಸ ಗೃಹ ಸಚಿವರು ಮಾಡುತ್ತಿದ್ದಾರೆ.

ಚಂದ್ರು ಕೊಲೆ ಕೇಸನ್ನು ಸಿಐಡಿಗೆ ಕೊಡುತ್ತಿವೆ ಎಂದು ಸಿಎಂ ಹೇಳುತ್ತಿದ್ದಾರೆ. ಆದರೆ ಸಿಐಡಿಯೂ ಅವರ ವ್ಯಾಪ್ತಿಯಲ್ಲೆ ಬರುತ್ತದೆ. ನ್ಯಾಯಸಮ್ಮತವಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಅಂದ್ರೆ ಸಿಬಿಐಗೆ ಕೊಡಿ, ಇಲ್ಲಾ ಹೈಕೋರ್ಟ್ ನ್ಯಾಯಾಮೂರ್ತಿಗಳ ನಿಗಾದಲ್ಲಿ ತನಿಖೆ ನಡೆಯಬೇಕು ಎಂದು ಒತ್ತಾಯ ಮಾಡಿದ್ದಾರೆ.

ಕಾನೂನೂ ಕಾಪಾಡೋರೆ ಪ್ರಚೋದನಕಾರಿ ಹೇಳಿಕೆ ಕೊಡುತ್ತಿದ್ದು, ಅವರ ವಿರುದ್ಧವೂ ತನಿಖೆಯಾಗಬೇಕು ಎಂದು ಬೀದರ್‌ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *