ಮನವೊಲಿಕೆಗೆ ಕೈ ನಾಯಕರಿಂದ 2 ಗಂಟೆ ಕಸರತ್ತು – ಯಾವುದೇ ಸ್ಪಷ್ಟ ಭರವಸೆ ನೀಡದ ರೆಡ್ಡಿ

ಬೆಂಗಳೂರು: ಅತೃಪ್ತ ಶಾಸಕ ರಾಮಲಿಂಗರೆಡ್ಡಿ ಅವರನ್ನು ಮನವೊಲಿಸಲು ಕಾಂಗ್ರೆಸ್ ನಾಯಕರ ಕಸರತ್ತು ಮಾಡಿದ್ದಾರೆ. ಆದರೆ ರೆಡ್ಡಿ ಅವರು ಯಾವುದೇ ಖಚಿತ ಭರವಸೆಯನ್ನು ನೀಡಲಿಲ್ಲ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಲಕ್ಕಸಂದ್ರದ ರಾಮಲಿಂಗಾರೆಡ್ಡಿ ನಿವಾಸಕ್ಕೆ ಕಾಂಗ್ರೆಸ್ ನಾಯಕರಾದ ಈಶ್ವರ ಖಂಡ್ರೆ ಹಾಗೂ ಹೆಚ್.ಕೆ. ಪಾಟೀಲ್ ಬಂದಿದ್ದರು. ಪಾಟೀಲ್ ಹಾಗೂ ಈಶ್ವರ್ ಖಂಡ್ರೆ ರಾಮಲಿಂಗಾರೆಡ್ಡಿಗೆ ಆಪ್ತರು. ಹೀಗಾಗಿ ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸಲು ಸತತವಾಗಿ ಎರಡು ಗಂಟೆಯ ಕಾಲ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಖಾಲಿ ಕೈಯಲ್ಲಿ ಕೈ ನಾಯಕರು ವಾಪಸ್ಸಾಗಿದ್ದಾರೆ.

ರಾಜೀನಾಮೆ ಹಿಂಪಡೆಯುವ ಬಗ್ಗೆ ರಾಮಲಿಂಗಾರೆಡ್ಡಿ ಅವರು ಗುಟ್ಟು ಬಿಟ್ಟು ಕೊಡದೆ ಸಸ್ಪನ್ಸ್ ಆಗಿ ಇಟ್ಟಿದ್ದಾರೆ. ಚರ್ಚೆಯಾದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ದಿನಾಂಕ 15ರವರೆಗೂ ಯಾವ ರಾಜಕೀಯದ ಬಗ್ಗೆಯೂ ಮಾತನಾಡಲ್ಲ. ಎಲ್ಲರೂ ಆಪ್ತರು ಮಾತನಾಡಲು ಬಂದಿದ್ದರು ಅಷ್ಟೇ ಎಂದು ಹೇಳಿದರು.

ಸೋಮವಾರ ಸ್ಪೀಕರ್ ಅವರನ್ನು ರಾಮಲಿಂಗಾರೆಡ್ಡಿ ಅವರು ಭೇಟಿ ಮಾಡಲಿದ್ದಾರೆ. ಹೀಗಾಗಿ ನಾಳೆ ರಾಜೀನಾಮೆ ಹಿಂಪಡೆಯದ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸುವ ಹೊಣೆಯನ್ನು ಈಶ್ವರ್ ಖಂಡ್ರೆಗೆ ವಹಿಸಲಾಗಿತ್ತು. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಎರಡು ಬಾರಿ ರೆಡ್ಡಿ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ.

ಕಾಂಗ್ರೆಸ್ ಕಷ್ಟದಲ್ಲಿದೆ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ರಾಮಲಿಂಗಾರೆಡ್ಡಿ ಅವರನ್ನು ನಾನು ಮತ್ತೆ ಎಚ್.ಕೆ.ಪಾಟೀಲ್ ಅವರು ಭೇಟಿಯಾಗಿದ್ದೇವೆ. ಇಂದು ಕಾಂಗ್ರೆಸ್ ಕಷ್ಟದಲ್ಲಿದೆ. ರಾಮಲಿಂಗಾರೆಡ್ಡಿ ಅವರು ಪಕ್ಷವನ್ನ ಬಲವಾಗಿ ಕಟ್ಟಿದ್ದಾರೆ. ಹೀಗಾಗಿ ಅವರ ಸೇವೆ ಪಕ್ಷಕ್ಕೆ ಅವಶ್ಯಕತೆ ಇದೆ. ಇಂತಹ ಸಂದರ್ಭದಲ್ಲಿ ನಿಮ್ಮ ಅವಶ್ಯಕತೆ ಪಕ್ಷಕ್ಕೆ ಇದೆ ರಾಜೀನಾಮೆ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ. ರಾಮಲಿಂಗಾರೆಡ್ಡಿ ಅವರು ನಮ್ಮ ಮನವಿಗೆ ಸ್ಪಂದನೆ ಮಾಡುತ್ತಾರೆ. ಸರ್ಕಾರದ ಮತ್ತು ಪಕ್ಷದ ಜೊತೆ ಇರುತ್ತಾರೆ ಎಂಬ ಭರವಸೆ ಇದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

Comments

Leave a Reply

Your email address will not be published. Required fields are marked *