34 ವರ್ಷ ಬಂದ್ ನಡೆಸಿ ರಾಜ್ಯವನ್ನು ಸರ್ವನಾಶ ಮಾಡಿದ್ದು ಸಾಕು- ಮಮತಾ ಬ್ಯಾನರ್ಜಿ ಕಿಡಿ

ಕೋಲ್ಕತ್ತಾ: ಎಡಪಕ್ಷಗಳು ಬಂದ್ ನಡೆಸಿ 34 ವರ್ಷಗಳ ಕಾಲ ರಾಜ್ಯವನ್ನು ಸರ್ವನಾಶ ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ಪಶ್ಚಿಮ ಬಂಗಾಳದಲ್ಲಿ ಯಾವುದೇ ಬಂದ್‍ಗೆ ಬೆಂಬಲ ನೀಡಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ವಿರೋಧಿಸಿ 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಮಂಗಳವಾರದಿಂದ 48 ಗಂಟೆಗಳ ಕಾಲ ಭಾರತ್ ಬಂದ್‍ಗೆ ಕರೆ ನೀಡಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ ಅವರು, ಬಂದ್ ಕರೆಯು ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಿ ನೌಕರರು ಮಂಗಳವಾರ ಮತ್ತು ಬುಧವಾರ ಯಾವುದೇ ರಜೆ ತೆಗೆದುಕೊಳ್ಳುವಂತಿಲ್ಲ ಎಂದು ಕಳೆದ ವಾರವೇ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇತ್ತ ಕೋಲ್ಕತ್ತಾದಲ್ಲಿ ಸೋಮವಾರದಿಂದ 500 ಹೆಚ್ಚುವರಿ ಬಸ್‍ಗಳ ಸಂಚಾರಕ್ಕೆ ಆದೇಶ ಕೂಡ ನೀಡಲಾಗಿದೆ.

ಖಾಸಗಿ ಬಸ್, ಟ್ಯಾಕ್ಸಿ ಹಾಗೂ ಆ್ಯಪ್ ಆಧಾರಿತ ಸಾರಿಗೆ ವ್ಯವಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಮಾಲೀಕರು ತಿಳಿಸಿದ್ದಾರೆ.

ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಶಾಂತಿ ಕದಡುವ ಹಾಗೂ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಸರ್ಕಾರ ಆದೇಶ ನೀಡಿದೆ. ಹೀಗಾಗಿ ಮಾರುಕಟ್ಟೆ ಸ್ಥಳ, ಮಾಲ್ ಸೇರಿದಂತೆ ವಾಣಿಜ್ಯ ಪ್ರದೇಶಗಳು ಎಂದಿನಂತೆ ತೆರೆದಿರುತ್ತವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *