ಚಾಟಿಂಗ್ ಮಾಡ್ಬೇಡ ಅಂದಿದ್ದಕ್ಕೆ ಮನೆ ಬಿಟ್ಟು ಹೋದ ಎಂಜಿನಿಯರಿಂಗ್ ವಿದ್ಯಾರ್ಥಿ!

ಬೆಂಗಳೂರು: ವಾಟ್ಸಾಪ್ ಚಾಟಿಂಗ್ ಬಿಟ್ಟು ಓದಿಕೋ ಎಂದು ಹೇಳಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋಗಿದ್ದಾನೆ.

ಪ್ರಶಾಂತ್ ಗೌಡ ಮನೆ ಬಿಟ್ಟು ಹೋದ ಯುವಕ. ನಗರದ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ದ್ವಿತೀಯ ವರ್ಷ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಶಾಂತ್, ಬೆಂಗಳೂರಿನ ವಿಜಯನಗರ ತಮ್ಮ ಮಾವನ ಮನೆಯಲ್ಲಿ ವಾಸವಿದ್ದನು.

ಇಂಟರ್ನಲ್ ಎಕ್ಸಾಂ ಇದೆ ವಾಟ್ಸಾಪ್ ಚಾಟಿಂಗ್ ಬಿಟ್ಟು ಓದಿಕೋ ಎಂದು ಮಾವ ಸ್ವಾಮಿ ಬುದ್ಧಿಹೇಳಿದ್ದಕ್ಕೆ ಪ್ರಶಾಂತ್ ಮರುದಿನವೇ ಹಿರಿಯೂರಿಗೆ ಬರುವುದಾಗಿ ತಂದೆ ತಾಯಿಗೆ ಫೋನ್ ಮಾಡಿ ತಿಳಿಸಿದ್ದಾನೆ. ಬಳಿಕ ತನ್ನ ಫೇಸ್ ಬುಕ್ ಅಕೌಂಟ್, ಗೂಗಲ್ ಅಕೌಂಟ್, ವಾಟ್ಸಾಪ್, ಗ್ಯಾಲರಿಯಲ್ಲಿದ್ದ ಫೊಟೋಗಳನ್ನ ಡಿಲೀಟ್ ಮಾಡಿ ಮನೆ ಬಿಟ್ಟು ಹೋಗಿದ್ದಾನೆ.

ನಾಗರಾಜ್, ಹಾಗೂ ಚಿಂತಾಮಣಿ ದಂಪತಿಯ ಒಬ್ಬನೇ ಮಗನಾಗಿದ್ದ ಪ್ರಶಾಂತ್ ಹತ್ತು ದಿನದಿಂದ ಕಣ್ಮರೆಯಾಗಿದ್ದು. ಪ್ರಶಾಂತ್ ತಂದೆ-ತಾಯಿ ಆತನಿಗೆ ಕಣ್ಣೀರಿಟ್ಟು ಪರಿತಪಿಸುತ್ತಿದ್ದಾರೆ.

ಪ್ರಶಾಂತ್ ತಂದೆ ತಾಯಿ ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಗನಿಗಾಗಿ ಹುಡುಕಾಡುತ್ತಿದ್ದಾರೆ. ಮಗ ಬಾರದಿದ್ದರೆ ನಾನು ಬದುಕುವುದಿಲ್ಲ ಎಂದು ಪ್ರಶಾಂತ್ ತಾಯಿ ಚಿಂತಾಮಣಿ ಕಣ್ಣೀರು ಹಾಕುತ್ತಿದ್ದಾರೆ.

ಚೆನ್ನಾಗಿ ಓದುತ್ತಿದ್ದ ಪ್ರಶಾಂತ ಹೀಗೆ ಕಣ್ಮರೆಯಾಗಿರುವುದು ಹಲವು ಅನುಮಾನಕ್ಕೆ ಕಾರಣ ವಾಗಿದೆ. ಕಾಲೇಜಿನಲ್ಲಿ ವಿಚಾರಿಸಿದರೆ ಒಳ್ಳೇ ಹುಡುಗ ಎಂದು ಹೇಳುತ್ತಾರೆ. ಸ್ನೇಹಿತರ ಬಳಗದಲ್ಲೂ ಒಳ್ಳೆಯ ಹುಡುಗ ಎನಿಸಿಕೊಂಡಿದ್ದ ಎಂದು ಪ್ರಶಾಂತ್ ತಾಯಿ ತಿಳಿಸಿದ್ದಾರೆ. ಈ ಬಗ್ಗೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

Comments

Leave a Reply

Your email address will not be published. Required fields are marked *