ಸಿಆರ್ ಎಲೆಕ್ಷನ್ ಸೋತಿದ್ದಕ್ಕೆ ರ‍್ಯಾಗಿಂಗ್- ಮನನೊಂದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

ಮೇಘನಾ(18) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಮೇಘನಾ ಕುಮಾರಸ್ವಾಮಿ ಲೇಔಟ್‍ನ ದಯಾನಂದಸಾಗರ ಕಾಲೇಜಿನಲ್ಲಿ 2ನೇ ಸೆಮಿಸ್ಟರ್ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಳು.

ಕಾಲೇಜಿನಲ್ಲಿ ನಡೆದ ಕ್ಲಾಸ್ ರೆಪ್ರೆಸೆಂಟೇಟಿವ್ ಎಲೆಕ್ಷನ್ ನಲ್ಲಿ ಮೇಘನಾ ಭಾಗವಹಿಸಿದ್ದಳು. ಆದರೆ ಆ ಎಲೆಕ್ಷನ್ ನಲ್ಲಿ ಸೋತಿದ್ದಕ್ಕೆ ತರಗತಿಯ ಇತರೆ ವಿದ್ಯಾರ್ಥಿಗಳು ಮೇಘನಾಳನ್ನು ರ‍್ಯಾಗಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರದ ಬಗ್ಗೆ ಮೇಘನಾ ತನ್ನ ಪೋಷಕರ ಹತ್ತಿರ ಹೇಳಿಕೊಂಡಿದ್ದಳು.

ನನ್ನ ಮಗಳು ಸಿಆರ್ ಆಗಬೇಕೆಂದು ಸೌದಾಮಿನಿ ವಿರುದ್ಧ ಎಲೆಕ್ಷನ್ ನಲ್ಲಿ ನಿಂತಳು. ಮೆಜಾರಿಟಿ ಇದೆ, ನಾನು ಎಲೆಕ್ಷನ್ ಗೆ ನಿಲ್ಲುತ್ತೇನೆ ಎಂದು ಹೇಳಿದ್ದಳು. ಆಗ ಅವಳು ನಾಯಿ ಎಂದು ಹೇಳಿದ್ದಾಳೆ. ಆಗ ನನ್ನ ಮಗಳು ಕೂಡ ನಾಯಿ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲದೇ ಕ್ಲಾಸಿನಲ್ಲಿದ್ದ 70 ಜನರಿಗೆ ನನ್ನ ಮಗಳು ಕೆಟ್ಟವಳು ಎಂದು ಮೆಸೇಜ್ ಕಳುಹಿಸಿದ್ದಾಳೆ. ಆ ಮೆಸೇಜ್‍ನಿಂದ ನನ್ನ ಮಗಳ ಜೊತೆ ಯಾರೂ ಮಾತನಾಡುತ್ತಿರಲಿಲ್ಲ. ಸೌದಾಮಿನಿ, ನಿಖಿಲ್, ನಿಖಿತಾ, ಪೂಜಾ ಹಾಗೂ ಸಂಧ್ಯಾ ಇವರನ್ನ ಕೂಡಲೇ ಬಂಧಿಸಬೇಕು ಎಂದು ಮೇಘನಾ ತಾಯಿ ಹೇಳಿದ್ದಾರೆ.

ನನ್ನ ಮಗಳು ರ‍್ಯಾಂಕ್ ವಿದ್ಯಾರ್ಥಿನಿ. ಅವಳು ನೋಟ್ಸ್ ಕೇಳಿದರು ಯಾರೂ ಆಕೆಗೆ ನೀಡುತ್ತಿರಲಿಲ್ಲ. ಮಗಳ ಸಮಸ್ಯೆ ಬಗ್ಗೆ ಮಾತನಾಡಲು ಕಾಲೇಜಿನ ಎಚ್‍ಒಡಿ ರಾಜ್‍ಕುಮಾರ್ ಮರಿಸ್ವಾಮಿ ಅವರನ್ನು ಕೇಳಲು ಹೋದಾಗ ಅವರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಿಮ್ಮ ಮಗಳು ಸಿಇಟಿ ಕೋಟಾದಿಂದ ಬಂದಿರೋದೋ ಅಥವಾ ಪೇಮೆಂಟ್ ಕೋಟಾದಿಂದ ಬಂದಿರೋದೋ ಎಂದು ಹಿಯಾಳಿಸಿದರು. ನಿಖಿಲ್ ನಾನು ಪೇಮೆಂಟ್ ಕೋಟಾದಿಂದ ಬಂದಿದ್ದೇನೆ ಎಂದು ಹೇಳಿದ ಕೂಡಲೇ ಆತನನ್ನು ಅಲ್ಲಿಂದ ಕಳುಹಿಸಿದರು. ನಾನು ನನ್ನ ಮಗಳು ಸಿಇಟಿ ಕೋಟಾದಿಂದ ಬಂದಿದ್ದಾಳೆಂದು ಹೇಳಿದ್ದಕ್ಕೆ ಸ್ವಲ್ಪ ಅನುಸರಿಸಿ ಹೋಗಬೇಕೆಂದು ಹೇಳಿದ್ರು ಅಂತ ತಿಳಿಸಿದ್ದಾರೆ.

ಸ್ವಲ್ಪ ದಿನದ ನಂತರ ಪರೀಕ್ಷೆಯ ಫಲಿತಾಂಶ ಬಂದಾಗ ಆ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆಂದು ಮೇಘನಾ ಹೇಳಿದ್ದಳು. ನಂತರ ಮಾರನೇ ದಿನವೇ ದುಡ್ಡು ಕೊಟ್ಟು ಆ ವಿಷಯದಲ್ಲಿ ಪಾಸ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದಳು. ಅಷ್ಟೇ ಅಲ್ಲದೇ ನನ್ನ ಮಗಳು ಕಾಲೇಜಿಗೆ ರಜೆ ಹಾಕಿ ಮಾರನೇ ದಿನ ಹೋಗಿ ನೋಟ್ಸ್ ಕೇಳಿದರೆ ನಾನು ಕೋಡುವುದಿಲ್ಲ ಎಂದು ಹೇಳುತ್ತಿದ್ದರು. ಸೌದಾಮಿನಿ ಸಿಆರ್ ಆದ ನಂತರ ವಾಟ್ಸಪ್ ಗ್ರೂಪ್ ನಲ್ಲಿ ನನ್ನ ಮಗಳ ನಂಬರ್ ಬ್ಲಾಕ್ ಮಾಡಿದ್ದಳು. ಅವಳಿಗೆ ಯಾವ ನೋಟ್ಸ್ ಬರದಂತೆ ಮಾಡಿದ್ದಳು ಎಂದು ಮೇಘನಾ ತಾಯಿ ತಿಳಿಸಿದ್ದಾರೆ.

ನನ್ನ ಮಗಳಿಗೆ ಆದ ಅನ್ಯಾಯ ಕೇಳಿದಾಗ ಯಾರೂ ನನ್ನ ಮಾತನ್ನು ಕೇಳುತ್ತಿರಲಿಲ್ಲ. ಅಲ್ಲಿ ನಮ್ಮ ಮಾತನ್ನು ಯಾರೂ ಕೇಳುವುದಿಲ್ಲ. ಎಲ್ಲ ಒಂದು ಗುಂಪಾಗಿದ್ದಾರೆ. ಅವರ ಮುಂದೆ ನಾವು ಗೆಲ್ಲಲ್ಲು ಆಗಲ್ಲ, ನಾವು ಸೋತಿದ್ದೇವೆ. ನಾವೇ ಇವರ ಮುಂದೆ ಸೋಲಬೇಕು ಎಂದು ಮೇಘನಾ ಹೇಳುತ್ತಿದ್ದಳು. ಸಿಆರ್ ವಿಷಯಕ್ಕೆ ಜಗಳ ಆಗಿ ಸೌದಾಮಿನಿ ಇಡೀ ಕ್ಲಾಸ್‍ಗೆ ನನ್ನ ಮಗಳ ಜೊತೆ ಸೇರಬಾರದು ಎಂದು ಮೆಸೇಜ್ ಮಾಡುತ್ತಿದ್ದಳು. ಇದ್ದರಿಂದ ನನ್ನ ಮಗಳು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೇಘನಾ ತಾಯಿ ಹೇಳಿದ್ದಾರೆ.

ಮೇಘನಾ ತಂದೆ ಚಂದ್ರಶೇಖರ್ ಅಂಧರಾಗಿದ್ದು, ಅವರ ಪತ್ನಿ ಲತಾ ಪತಿಯನ್ನ ಕೆಲಸಕ್ಕೆ ಬಿಡಲು ಹೋಗಿದ್ದ ವೇಳೆ ಮೇಘನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೇಘನಾ ಪೋಷಕರು ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಆರ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *