ಲೋಕ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಲೋಕದ ಹಾದಿ ಹಿಡಿದ ಎಂಜಿನಿಯರ್!

ಯಾದಗಿರಿ: ಅವರೊಬ್ಬ ಎಲೆಕ್ಟ್ರಿಕಲ್ ಎಂಜಿನಿಯರ್. ಆದ್ರೆ ಇದೀಗ ತನ್ನ ವೃತ್ತಿಯನ್ನು ಬಿಟ್ಟು ಲೋಕ ಕಲ್ಯಾಣಕ್ಕಾಗಿ ಆಧ್ಯಾತ್ಮಿಕ ಲೋಕದ ಹಾದಿ ಹಿಡಿದಿದ್ದಾರೆ. ತನ್ನ ಮನೆ ಮಠ ಮತ್ತು ಸಂಸಾರದ ಜಂಜಾಟ ತೊರೆದು ಈಗ ಉತ್ತಮ ಮಳೆ ಹಾಗೂ ಸಮೃದ್ಧಿ ಬೆಳೆಗಾಗಿ ನಾಡಿನ ಒಳಿತಿಗಾಗಿ ಅನುಷ್ಠಾನ ಕೈಗೊಂಡಿದ್ದಾರೆ.

ಹೌದು. ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಬಾದ್ಯಾಪೂರ ಗ್ರಾಮದ ಶ್ರೀ ಸಿದ್ದ ಯಲ್ಲಾಲಿಂಗಮಠದ ಪೀಠಾಧಿಪತಿಯಾದಂತಹ ಸಚ್ಚಿದಾನಂದ ಸ್ವಾಮೀಜಿ ಅವರು ಕಳೆದ 3 ತಿಂಗಳಿನಿಂದ ಮಠದ ಗುಹೆಯೊಳಗೆ ಅನುಷ್ಠಾನಕ್ಕೆ ಕುಳಿತಿದ್ದಾರೆ. ಈ ಹಿಂದೆ ಕೂಡಾ ಬಹಳಷ್ಟು ಸ್ಥಳಗಳಲ್ಲಿ ಅನುಷ್ಠಾನ ಮಾಡುವ ಮೂಲಕ ತಮ್ಮ ಪವಾಡದಿಂದ ಭಕ್ತರ ಕಷ್ಟಗಳನ್ನ ದೂರ ಮಾಡಿದ್ದಾರೆ ಅಂತಾ ಭಕ್ತರು ಸ್ವಾಮೀಜಿಯ ಬಗ್ಗೆ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಅನುಷ್ಠಾನದಿಂದ ಹೊರಬಂದ ಈ ಸ್ವಾಮಿಯ ದರ್ಶನಕ್ಕೆ ಭಕ್ತಾದಿಗಳೆಲ್ಲಾ ಆಗಮಿಸಿದ್ದಾರೆ.

ಈ ಸ್ವಾಮೀಜಿ ಯಾದಗಿರಿ ತಾಲ್ಲೂಕಿನ ಎಲೆರಿ ಗ್ರಾಮದ ನೀವಾಸಿಯಾಗಿದ್ದು, ತಮ್ಮ ಶಿಕ್ಷಣವನ್ನ ರಾಯಚೂರು ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ವಿಭಾಗದ ಪದವಿ ಪಡೆದು ಜಮಖಂಡಿ ಬಳಿ ಇರುವ ಸಕ್ಕರೆ ಕಾರ್ಖಾನೆಯಲ್ಲಿ ಎಂಜಿನಿಯರಾಗಿ ಕಾರ್ಯನಿರ್ವಹಿಸಿದ್ದರು. ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿರುವ ಇವರು 10 ವರ್ಷಗಳ ಹಿಂದೆ ಸಂಸಾರದ ಜಂಜಾಟವನ್ನು ತೊರೆದು ಲೋಕ ಕಲ್ಯಾಣಕ್ಕಾಗಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಬಳಿಕ ಇವರು ತಿಂಥಣಿ ಕೊಂಡಯ್ಯಪ್ಪಮಠ ಮತ್ತು ಎಲ್ಹೇರಿ ಮತ್ತು ಬಾದ್ಯಪೂರ ಗ್ರಾಮದ ಗಳಲ್ಲಿ ಅನುಷ್ಠಾನ ಮಾಡುವ ಮೂಲಕ ಪ್ರಸಿದ್ಧಿಯಾಗಿದ್ದರು. ಇದೀಗ ಮತ್ತೊಮ್ಮೆ ನಾಡಿನ ಒಳಿತಿಗಾಗಿ 225 ದಿನಗಳ ಕಾಲ ತಪಸ್ಸು ಮಾಡುವ ಮೂಲಕ ನಾಡಿನಲ್ಲಿ ಉತ್ತಮ ಮಳೆ ಮತ್ತು ಸಮೃದ್ಧಿ ಬೆಳೆಗಾಗಿ ರೈತರ ಮತ್ತು ಭಕ್ತರ ಸಂಕಷ್ಟ ದೂರವಾಗಲೆಂದು ಈ ಅನುಷ್ಠಾನ ಕೈಗೊಂಡಿದ್ದಾರೆ ಎಂಬುವುದು ಭಕ್ತರ ಹೇಳಿಕೆಯಾಗಿದೆ.

Comments

Leave a Reply

Your email address will not be published. Required fields are marked *