ಎಲ್ಲಿದ್ದೀಯಪ್ಪಾ, ಜೋಡೆತ್ತು, ಕಳ್ಳೆತ್ತು ಟೈಟಲ್‍ಗೆ ಚಿತ್ರಮಂಡಳಿ ಅಸ್ತು

ಬೆಂಗಳೂರು: ಎಲ್ಲಿದ್ದೀಯಪ್ಪಾ?, ಜೋಡೆತ್ತು ಹಾಗೂ ಕಳ್ಳೆತ್ತು ಲೋಕಸಭಾ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ್ದವು. ಈ ಬೆನ್ನಲ್ಲೇ ಮೂರೂ ಟೈಟಲ್‍ಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿಯಾಗಿವೆ.

‘ಎಲ್ಲಿದ್ದೀಯಪ್ಪಾ?’ ಟೈಟಲ್ ನಿರ್ಮಾಪಕ ಎ.ಗಣೇಶ್ ಅವರ ಪಾಲಾಗಿದೆ. ಅವರು ಶ್ರೀಚಾಮುಂಡೇಶ್ವರಿ ಫಿಲಂಸ್ ಬ್ಯಾನರ್ ಅಡಿ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಅಷ್ಟೇ ಅಲ್ಲದೆ ನಿರ್ಮಾಪಕ ವಿಜಯ್ ಕುಮಾರ್ ಅವರು ‘ಕಳ್ಳೆತ್ತು’ ಟೈಟಲ್‍ಗೆ ನೋಂದಣಿ ಮಾಡಿಸಿದ್ದಾರೆ.

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪ್ರಚಾರದ ವೇಳೆ ‘ನಿಖಿಲ್ ಎಲ್ಲಿದ್ದೀಯಪ್ಪಾ?’ ಎಂಬ ಡೈಲಾಗ್ ಬಹು ಜನಪ್ರಿಯವಾಗಿತ್ತು. ಬಳಿಕ ಇದು ಸಾಮಾಜಿಕ ತಾಣದಲ್ಲಿ ಸಾಕಷ್ಟು ವೈರಲ್ ಆಗಿ, ವಿದೇಶಗಳಲ್ಲಿಯೂ ಸದ್ದುಮಾಡಿತ್ತು. ಈ ಹೆಸರಿನ ಚಿತ್ರದ ನಿರ್ಮಾಣಕ್ಕೆ ಸ್ಯಾಂಡಲ್‍ವುಡ್‍ನಲ್ಲಿ ಅನೇಕರು ಮುಂದಾಗಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಇತ್ತೀಚೆಗಷ್ಟೇ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ ಅವರು, ‘ನಿಖಿಲ್ ಎಲ್ಲಿದ್ದೀಯಪ್ಪಾ?’ ಸಿನಿಮಾಗೆ ನಾನೇ ಹೀರೋ, ಸಚಿವ ಸಿ.ಎಸ್.ಪುಟ್ಟರಾಜು ಅವರೇ ಪ್ರೊಡ್ಯೂಸರ್. ಈ ಟೈಟಲ್ ಅನ್ನು ಯಾರಿಗೂ ಕೊಡದಂತೆ ಚಿತ್ರಮಂಡಳಿಗೆ ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದರು.

ನಿಖಿಲ್ ಕುಮಾರಸ್ವಾಮಿ ಹೇಳಿಕೆ ಪ್ರತಿಕ್ರಿಯೆ ನೀಡಿದ್ದ ನಿರ್ಮಾಪಕ ಎ ಗಣೇಶ್ ಅವರು, ಈಗಾಗಲೇ ‘ಎಲ್ಲಿದ್ದೀಯಪ್ಪಾ’ ಟೈಟಲ್ ಅಪ್ರೂವ್ ಆಗಿದೆ. ಹೀಗಾಗಿ ‘ನಿಖಿಲ್ ಎಲ್ಲಿದ್ದೀಯಪ್ಪಾ’ ಟೈಟಲ್‍ಗೆ ಅನುಮತಿ ನೀಡುವುದು ಬೇಡ. ಒಂದು ಅಪ್ರೂವ್ ಮಾಡಿದರೆ ನಮ್ಮ ಸಿನಿಮಾದ ಮೇಲೆ ಪರಿಣಾಮ ಬೀರುತ್ತದೆ ಎಂದು ಫಿಲ್ಮ್ ಛೇಂಬರ್ ಗೆ ಮನವಿ ಮಾಡಿಕೊಂಡಿದ್ದರು.

Comments

Leave a Reply

Your email address will not be published. Required fields are marked *