ನಡ್ಕೊಂಡು ಹೋಗ್ತಿದ್ದಾಗ ಕೇಬಲ್ ವೈಯರ್ ತುಳಿದು ವ್ಯಕ್ತಿ ದುರ್ಮರಣ

ಬೆಂಗಳೂರು: ಫುಟ್‍ಪಾತ್ ನಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಕಟ್ ಆಗಿ ಬಿದ್ದಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ಕೇಬಲ್ ವೈಯರ್ ತುಳಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ವೀವರ್ಸ್ ಕಾಲೋನಿ ಬಳಿ ನಡೆದಿದೆ.

ಮೃತ ವ್ಯಕ್ತಿಯು ಬನ್ನೇರುಘಟ್ಟ ಸಮೀಪದ ನೇಕಾರನಗರ ನಿವಾಸಿ ಬಾಲಕೃಷ್ಣ (32) ಎಂದು ತಿಳಿದುಬಂದಿದೆ. ಶನಿವಾರ ಸಂಜೆ 7ಗಂಟೆ ಸುಮಾರಿಗೆ ಕೋಳಿಫಾರಂಲೇಔಟ್ ಗೇಟ್‍ನ ರಸ್ತೆಯಲ್ಲಿ ಬಾಲಕೃಷ್ಣ ನಡೆದುಕೊಂಡು ಬರುತ್ತಿದ್ದರು. ಆಗ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಕೇಬಲ್ ವೈಯರ್ ಕಟ್ಟಾಗಿ ನೆಲಕ್ಕೆ ಬಿದ್ದಿದ್ದು, ಆಕಸ್ಮಿಕವಾಗಿ ಬಾಲಕೃಷ್ಣ ವೈಯರ್ ತುಳಿದಿದ್ದಾರೆ. ಪರಿಣಾಮ ವೈಯರ್ ನಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿದ್ಯುತ್ ಕಂಬಕ್ಕೆ ಕೇಬಲ್ ವೈಯರ್ ಮತ್ತು ಕೇಬಲ್ ಬಾಕ್ಸ್ ಕಟ್ಟಿದ್ದು, ಕೇಬಲ್ ನೆಟ್ ವರ್ಕ್‍ನವರ ಬೇಜವಾಬ್ದಾರಿಯಿಂದಲೇ ಈ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಂದ ಕೋಣನಕುಂಟೆ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *