ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ವಿದ್ಯುತ್ ಶಾಕ್ – ಯೂನಿಟ್‍ಗೆ 35 ಪೈಸೆ ಹೆಚ್ಚಳ

ಬೆಂಗಳೂರು: ರಾಜ್ಯದಲ್ಲಿ ಹಿಜಬ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್ ಕಟ್-ಜಟ್ಕಾ ಕಟ್, ಧ್ವನಿವರ್ಧಕ ವಿವಾದ ನಡೆಯುತ್ತಿರುವ ಮಧ್ಯೆ ಪೆಟ್ರೋಲ್, ಡೀಸೆಲ್ ಬೆಲೆ ಪೈಸೆ ಪೈಸೆ ಲೆಕ್ಕದಲ್ಲಿ ಏರಿಕೆ ಕಾಣುತ್ತಿದೆ. ಇನ್ನೊಂದೆಡೆ ಸರ್ಕಾರ ರಾಜ್ಯದ ಜನತೆಗೆ ವಿದ್ಯುತ್ ಶಾಕ್ ನೀಡಿದೆ.

ಯುಗಾದಿ ಸಂಭ್ರಮದಿಂದ ಈಗಷ್ಟೇ ಹೊರಬಂದ ರಾಜ್ಯದ ಜನತೆ ತೈಲ ಬೆಲೆ ಏರಿಕೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಹೋಟೆಲ್ ಆಹಾರದ ದರ ಏರಿಕೆ ಬಳಿಕ ಇದೀಗ ವಿದ್ಯುತ್ ಬರೆ ಎಳೆದಿದೆ. ವಿದ್ಯುತ್ ದರವನ್ನು ಹೆಚ್ಚಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ. ಬೆಸ್ಕಾಂ ಸೇರಿ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ಪ್ರತಿ ಯೂನಿಟ್ ವಿದ್ಯುತ್ ದರವನ್ನು 35 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಅಧ್ಯಕ್ಷ ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: CNG, PNG ದರ ಮತ್ತಷ್ಟು ದುಬಾರಿ: ಎಲ್ಲಿ ಎಷ್ಟು ದರ..?

ಎಸ್ಕಾಂಗಳು ಪ್ರತಿ ಯೂನಿಟ್ ವಿದ್ಯುತ್ ದರವನ್ನು 1.85 ರೂ.ವರೆಗೂ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಸರ್ಕಾರದ ಜೊತೆಗಿನ ಮಾತುಕತೆ ಬಳಿಕ ಯೂನಿಟ್ ವಿದ್ಯುತ್ ದರವನ್ನು 35 ಪೈಸೆ ಹೆಚ್ಚಿಸಿ ಆದೇಶ ಹೊರಬಿದ್ದಿದೆ. ಇದನ್ನೂ ಓದಿ: ಬೆಲೆ ಏರಿಸುತ್ತಿರುವ ಈ ಸರ್ಕಾರ ಒಂದು ರೀತಿ ಕೋಲ್ಡ್‌ಬ್ಲಡೆಡ್ ಹಂತಕನಿದ್ದಂತೆ: ದಿನೇಶ್ ಗುಂಡೂರಾವ್

ಒಂದು ಕಡೆ ಸರ್ಕಾರ ದರ ಏರಿಕೆ ಶಾಕ್ ಕೊಟ್ಟರೆ ಇನ್ನೊಂದು ಕಡೆ ಹೋಟೆಲ್ ಮಾಲೀಕರ ಸಂಘ ಶೇ.10ರಷ್ಟು ಆಹಾರ ದರ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಕಳೆದ 14 ದಿನಗಳಿಂದ ತೈಲ ಬೆಲೆ ಏರಿಕೆಯಾಗಿದ್ದು, ಇದುವರೆಗೆ 8 ರೂಪಾಯಿ 40 ಪೈಸೆ ಜಾಸ್ತಿ ಆಗಿದೆ. ಇಂದು ಬೆಂಗಳೂರಿನಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 109.41 ರೂ. ಮತ್ತು ಡೀಸೆಲ್‌ ಬೆಲೆ 93.23 ರೂ. ತಲುಪಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹಾಗಾಗಿ ರಾಜ್ಯದ ಜನತೆ ಬೆಲೆ ಏರಿಕೆಯಿಂದ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯತ್ತ ಮುಖ ಮಾಡಲಾರಂಭಿಸಿದೆ. ಇದೀಗ ಬೇಸಿಗೆ ಝಳದಲ್ಲಿರುವ ಹೊತ್ತಿಗೆ ಸರ್ಕಾರ ವಿದ್ಯುತ್ ದರ ಹೆಚ್ಚಿಸಿ ಆದೇಶ ನೀಡಿರುವುದು ಜನಸಾಮಾನ್ಯರ ಹೊಟ್ಟೆ ಮೇಲೆ ಹೊಡೆದಂತಾಗಿದೆ ಎಂದು ವಿಪಕ್ಷ ಮತ್ತು ಜನಸಾಮಾನ್ಯರು ವಿರೋಧ ವ್ಯಕ್ತ ಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *