ಆಟವಾಡುತ್ತಿದ್ದ ಬಾಲಕನಿಗೆ ವಿದ್ಯುತ್ ಶಾಕ್ – ಐಸಿಯುನಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ

ಬೆಂಗಳೂರು: ಇತ್ತೀಚೆಗಷ್ಟೇ ಎಲ್‍ಆರ್ ಬಂಡೆಯಲ್ಲಿ ಆಟವಾಡುತ್ತಿದ್ದ ಬಾಲಕ ವಿಕ್ರಂ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಇದೀಗ ಆ ಘಟನೆ ಮಾಸುವ ಮುನ್ನವೇ ಅದೇ ರೀತಿಯ ಘಟನೆಯೊಂದು ಶುಕ್ರವಾರ ಸಂಜೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನ 7ನೇ ಕ್ರಾಸ್‍ನಲ್ಲಿ ನಡೆದಿದೆ.

9 ವರ್ಷದ ಸಾಯಿ ಚರಣ್ ಗಾಯಕ್ಕೊಳಗಾಗಿರುವ ಬಾಲಕ. ನಾಗಮ್ಮ ನಾಗಲಿಂಗೇಶ್ವರ ದೇವಾಲಯದ ಬಳಿ ಬಸವರಾಜ್ ಮತ್ತು ರೇವತಿ ದಂಪತಿಯ ಪುತ್ರ ಸಾಯಿ ಚರಣ್ ನಿನ್ನೆ ಸಂಜೆ ಸ್ನೇಹಿತರೊಂದಿಗೆ ಬಾಲ್ ಆಟ ಆಡುತ್ತಿದ್ದನು.

ಈ ವೇಳೆ ವಿದ್ಯುತ್ ಕಂಬದ ಹತ್ತಿರ ಹೋದಾಗ ಕಂಬದಿಂದ ಜೋತು ಬಿದ್ದಿದ್ದ ವಯರ್‌ನಿಂದ ಕರೆಂಟ್ ಶಾಕ್ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, 24 ಗಂಟೆಗಳ ಕಾಲ ಏನೂ ಹೇಳುವುದಕ್ಕೂ ಆಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಬಾಲಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.

ಬೆಸ್ಕಾಂ ಅಧಿಕಾರಿಗಳು ವಾರಕ್ಕೊಮ್ಮೆ ಕಂಬದ ವಯರ್‌ಗಳು ಕೆಳಗೆ ಬಿದ್ದಿದ್ದರೆ, ಅದನ್ನು ಮೇಲೆ ಎತ್ತಿ ಕಟ್ಟಿ ಹೋಗುತ್ತಿದ್ದಾರೆ. ಆದರೆ ಶಾಶ್ವತ ಪರಿಹಾರ ಮಾಡುತ್ತಿಲ್ಲ. ಘಟನೆ ನಡೆದ ಸ್ಥಳಕ್ಕೆ ಬಾರದ ಅಧಿಕಾರಿಗಳು ಫೋನಿನಲ್ಲಿ ಬಂದು ಪರಿಶೀಲನೆ ಮಾಡುತ್ತೇವೆ ಎಂದು ಉಡಾಫೆ ಉತ್ತರ ಕೊಟ್ಟಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *