ಇಡಿ ಕರೆ ಬಂದಿಲ್ಲ, ವೈಯಕ್ತಿಕ ಕೆಲಸದ ಮೇಲೆ ದೆಹಲಿ ಬಂದಿರೋದು: ಜಮೀರ್ ಅಹ್ಮದ್ ಖಾನ್

ನವದೆಹಲಿ: ಜಾರಿ ನಿರ್ದೇಶನಾಲಯದಿಂದ ಯಾವುದೇ ಕರೆ ಮತ್ತು ನೋಟಿಸ್ ಬಂದಿಲ್ಲ. ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

ಇಂದು ಬೆಳಗ್ಗೆ ಸುಮಾರು 11 ಗಂಟೆಗೆ ಜಮೀರ್ ಅಹ್ಮದ್ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದರು. ಇಡಿ ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಯಾಣಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಆದ್ರೆ ದೆಹಲಿಯಲ್ಲಿ ಮಾತನಾಡಿದ ಜಮೀರ್ ಅಹ್ಮದ್ ಇಡಿ ನೋಟಿಸ್ ಬಗ್ಗೆ ಸ್ಪಷ್ಟನೆ ನೀಡಿದರು. ಇಡಿ ನೋಟಿಸ್ ಜಾರಿ ಮಾಡಿದ ವಿಚಾರ ಮುಚ್ಚಿಡಲು ಜಮೀರ್ ಪ್ರಯತ್ನಿಸುತ್ತಿರುವ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.

ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಇಡಿ ವಿಚಾರಣೆಯ ಕುರಿತು ಮಾತುಕತೆ ನಡೆಸಿರುವ ಮಾಹಿತಿ ಲಭ್ಯವಾಗಿತ್ತು. ಇಡಿ ವಿಚಾರಣೆ ಎದುರಿಸೋದು ಹೇಗೆ? ಹಿಂದಿನ ಘಟನಾವಳಿಗಳ ಬಗ್ಗೆ ಡಿ.ಕೆ.ಶಿವಕುಮಾರ್ ಬಳಿ ತಿಳಿದುಕೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಇಡಿಯ ರೀತಿರಿವಾಜುಗಳ ಬಗ್ಗೆ ಡಿ.ಕೆ.ಶಿವಕುಮಾರ್ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಡಿ.ಕೆ.ಶಿವಕುಮಾರ್ ಸಲಹೆ ಮೇರೆಗೆ ಹಿರಿಯ ವಕೀಲರಾದ ಕಪಿಲ್ ಸಿಬಲ್ ಭೇಟಿಗೆ ಜಮೀರ್ ಅಹ್ಮದ್ ದೆಹಲಿಗೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸೋಮವಾರ ಜಾರಿ ನಿರ್ದೇಶನಾಲಯದ ಮುಂದೆ ಜಮೀರ್ ಅಹ್ಮದ್ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: ಇಲ್ಲಿ ಕಿಸ್ ಮಾಡುವಂತಿಲ್ಲ – ಜೋಡಿಗಳ ಚುಂಬನದಿಂದ ಬೇಸತ್ತ ಸೂಸೈಟಿ

ಆಗಸ್ಟ್ 5ರಂದು ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ ಆಸ್ತಿಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಸಮಯಾವಕಾಶ ನೀಡಿತ್ತು. ಇಡಿ ನೀಡಿದ ಸಮಯ ಅಂತ್ಯವಾಗಿದ್ದರಿಂದ ವಿಚಾರಣೆಗಾಗಿಯೇ ಜಮೀರ್ ಅಹ್ಮದ್ ಖಾನ್ ದೆಹಲಿ ತೆರಳಿರುವ ಬಗ್ಗೆ ಅವರ ಆಪ್ತ ಮೂಲಗಳು ಖಚಿತಪಡಿಸಿವೆ. ಇದನ್ನೂ ಓದಿ: ಮನೆ ಕಟ್ಟಿಸಿದ್ದೇ ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗ್ತಿದೆ: ಜಮೀರ್ ಅಹ್ಮದ್ ಖಾನ್

Comments

Leave a Reply

Your email address will not be published. Required fields are marked *