ಡಿಕೆಶಿ ತಾಯಿ ಗೌರಮ್ಮಗೂ ಇಡಿ ಸಮನ್ಸ್

ಬೆಂಗಳೂರು: ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮುಂದೂಡಿದ ಬೆನ್ನಲ್ಲೇ ತಾಯಿ ಗೌರಮ್ಮಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಮಾಡಿದ ವಿಚಾರ ಲಭ್ಯವಾಗಿದೆ.

ನಾಳೆ ವಿಚಾರಣೆ ಬರುವಂತೆ ಗೌರಮ್ಮ ಅವರಿಗೆ ಇಡಿ ಸಮನ್ಸ್ ಜಾರಿಗೊಳಿಸಿದ್ದು, ಲೋಕನಾಯಕ್ ಭವನದಲ್ಲಿರುವ ಇಡಿ ಕಚೇರಿಗೆ ಆಗಮಿಸುವಂತೆ ಸೂಚಿಸಲಾಗಿದೆ. ಡಿ.ಕೆ ಶಿವಕುಮಾರ್ ಸೇರಿ ಅವರ ಕುಟುಂಬದ ನಾಲ್ಕನೇ ಸದಸ್ಯರಿಗೆ ಇಡಿ ಸಮನ್ಸ್ ನೀಡಿದೆ. ಈ ಹಿಂದೆ ಪುತ್ರಿ ಐಶ್ವರ್ಯ ಮತ್ತು ಸಹೋದರ ಡಿ.ಕೆ ಸುರೇಶ್ ಅವರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಈಗ ಡಿಕೆಶಿ ತಾಯಿ ಗೌರಮ್ಮಗೂ ಸಮನ್ಸ್ ಕೊಟ್ಟಿದ್ದಾರೆ.

ಗೌರಮ್ಮ ಅವರ ಖಾತೆಯಿಂದ ಕೋಟ್ಯಂತರ ರೂ. ಹಣ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಇಡಿ ಈಗ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ಈ ವಿಚಾರವಾಗಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ, ಸಹೋದರ ಡಿ.ಕೆ ಸುರೇಶ್, ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕಾಂಗ್ರೆಸ್ ನಾಯಕ ರಾಜಣ್ಣ ಸೇರಿದಂತೆ ಹಲವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇತ್ತ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ದೆಹಲಿ ಹೈಕೋರ್ಟಿನ ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಬೇಕಿತ್ತು. ಆದರೆ ಕೋರ್ಟಿಗೆ ಡಿಕೆಶಿ ಪರ ವಕೀಲರು ಬರಲಿಲ್ಲ. ಹೀಗಾಗಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.

ಕಳೆದ ವಿಚಾರಣೆಯಲ್ಲಿ ಡಿಕೆಶಿ ಪ್ರಕರಣದ ಸಂಪೂರ್ಣ ತನಿಖಾ ಪ್ರಗತಿಯನ್ನು ಕೋರ್ಟಿಗೆ ಸಲ್ಲಿಸಬೇಕು ಅಂತ ನ್ಯಾಯಾಧೀಶರು ಇಡಿ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ, ತನಿಖೆ ಪ್ರಗತಿ ವರದಿಯನ್ನು ಕೋರ್ಟಿಗೆ ಇಡಿ ಅಧಿಕಾರಿಗಳು ಸಲ್ಲಿಸಿ, ಹೆಚ್ಚುವರಿ ವರದಿ ಸಲ್ಲಿಸಬೇಕಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *