ನನ್ನ ಕೆಲಸದ ಸಮಯ ಮುಗೀತು ಎಂದ ಪೈಲಟ್- ಪ್ರಯಾಣಿಕರು ಬಸ್‍ನಲ್ಲಿ ಹೋಗ್ಬೇಕಾಯ್ತು

ಜೈಪುರ: ನನ್ನ ಕೆಲಸದ ಸಮಯ ಮುಗಿಯಿತು ಎಂದು ಹೇಳಿ ಪೈಲಟ್ ವಿಮಾನ ಹಾರಿಸಲು ನಿರಾಕರಿಸಿದ ಕಾರಣ ಅಲಯನ್ಸ್ ಏರ್ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ 40 ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ.

ಜೈಪುರದಿಂದ ದೆಹಲಿಗೆ ಹೋಗಬೇಕಿದ್ದ ಪ್ರಯಾಣಿಕರಲ್ಲಿ ಕೆಲವರನ್ನು ಬಸ್ ಮೂಲಕ ದೆಹಲಿಗೆ ಕಳಿಸಲಾಗಿದೆ. ಇನ್ನೂ ಕೆಲವರಿಗೆ ಹೋಟೆಲ್‍ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯ್ತು, ಉಳಿದವರನ್ನ ಇಂದು ಬೆಳಗ್ಗಿನ ವಿಮಾನದಲ್ಲಿ ಕಳಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೈಲಟ್‍ನ ಕೆಲಸದ ಸಮಯ ಮುಗಿದಿತ್ತು. ಹೀಗಾಗಿ ಅವರು ವಿಮಾನ ಹಾರಿಸಲು ಸಾಧ್ಯವಿರಲಿಲ್ಲ ಎಂದು ಜೈಪುರದ ಸಂಗನೇರ್ ವಿಮಾನ ನಿಲ್ದಾಣದ ನಿರ್ದೇಶಕರಾದ ಜೆಎಸ್ ಬಲ್ಹಾರಾ ಹೇಳಿದ್ದಾರೆ.

ನಾಗರೀಕ ವಿಮಾನಯಾನ ನಿರ್ದೇಶನಾಲಯದ ನಿಯಮಗಳ ಪ್ರಕಾರ ಸುರಕ್ಷತೆಯ ಕಾರಣದಿಂದ ಪೈಲಟ್ ಕೆಲಸದ ಸಮಯವನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ರಾತ್ರಿ ದೆಹಲಿಯಿಂದ ಬರಬೇಕಿದ್ದ ವಿಮಾನದ ಪೈಲಟ್ ಹಾಗೂ ಸಿಬ್ಬಂದಿ ಮತ್ತೆ ಜೈಪುರದಿಂದ ದೆಹಲಿಯ ವಿಮಾನದಲ್ಲಿ ಕಾರ್ಯ ನಿರ್ವಹಿಸಬೇಕಿತ್ತು. ಆದ್ರೆ ದೆಹಲಿ ವಿಮಾನ ತಡವಾಗಿದ್ದು, ಮಧ್ಯರಾತ್ರಿ 1.30ಕ್ಕೆ ಜೈಪುರದಲ್ಲಿ ಲ್ಯಾಂಡ್ ಆಯಿತು ಎಂದು ಏರ್ ಇಂಡಿಯಾ ಸ್ಟೇಷನ್ ಕಚೇರಿ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ನಾಗರೀಕ ವಿಮಾನಯಾನ ನಿರ್ದೇಶನಾಲಯ ಸೂಚಿಸಿರುವ ನಿಯಮದಿಂದಾಗಿ ಪೈಲಟ್ ಮತ್ತೆ ವಿಮಾನ ಹಾರಿಸಲು ನಿರಾಕರಿಸಿದ್ರು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *