ನಾನು ಸತ್ತು ಹುಟ್ಟಿದ್ದವಳು: ಕಷ್ಟಪಟ್ಟಿದ್ದನ್ನು ನೆನೆದು ದುನಿಯಾ ರಶ್ಮಿ ಕಣ್ಣೀರು

ಬೆಂಗಳೂರು: ಬಿಗ್ ಬಾಸ್ ಸೀಸನ್ -7 ಸ್ಪರ್ಧಿ ದುನಿಯಾ ರಶ್ಮಿ ಅವರು ನಾನು ಸತ್ತು ಹುಟ್ಟಿದ್ದವಳು ಎಂಬ ವಿಷಯವನ್ನು ಹೇಳಿದ್ದಾರೆ.

ಗುರುವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ನೀಡಿದ್ದರು. ಈ ವೇಳೆ ಸ್ಪರ್ಧಿಗಳ ತಮ್ಮ ತಂದೆ-ತಾಯಿ ಬಗ್ಗೆ ಮಾತನಾಡಬೇಕಿತ್ತು. ಈ ಟಾಸ್ಕ್ ನಲ್ಲಿ ಮೊದಲು ಚಂದನಾ ಹಾಗೂ ಕಿಶನ್ ಶುರು ಮಾಡಿದ್ದರು. ಬಳಿಕ ಸ್ಪರ್ಧಿಗಳು ತಮ್ಮ ತಂದೆ-ತಾಯಿ ಜೊತೆ ಆಗಿರುವ ಅನುಭವವನ್ನು ಹಂಚಿಕೊಂಡರು.

ಈ ಟಾಸ್ಕ್ ನಲ್ಲಿ ಮಾತನಾಡಿದ ದುನಿಯಾ ರಶ್ಮಿ, ನಮ್ಮ ತಂದೆ-ತಾಯಿಗೆ ಮೂರು ಜನ ಮಕ್ಕಳಿದ್ದರು. ಮೊದಲು ನನ್ನ ಅಣ್ಣ ಹುಟ್ಟಿದ್ದ. ಬಳಿಕ ನಾನು ಹುಟ್ಟಿದೆ. ಆದರೆ ನನ್ನ ತಂದೆಗೆ ಹೆಣ್ಣು ಮಕ್ಕಳೆಂದರೆ ಇಷ್ಟವಿರಲಿಲ್ಲ. ನನ್ನ ತಾಯಿ ಹಾಗೂ ದೊಡ್ಡಮ್ಮ ನನ್ನ ತಂದೆಗೆ ಸಮಾಧಾನ ಮಾಡಿದ್ದರು. ಬಳಿಕ ನಮ್ಮ ಫ್ಯಾಮಿಲಿ ಚೆನ್ನಾಗಿಯೇ ಇತ್ತು. ನನ್ನ ತಂದೆ ಕೂಡ ನನಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು.

ಈ ನಡುವೆ ನನ್ನ ತಾಯಿ ರಾಜಕೀಯಕ್ಕೆ ಪ್ರವೇಶಿದ್ದರು. ನನ್ನ ತಂದೆಯೇ ಅಮ್ಮನಿಗೆ ಬಲವಂತ ಮಾಡಿ ರಾಜಕೀಯದಲ್ಲಿ ಕೆಲಸ ಮಾಡುವಂತೆ ಹೇಳಿದ್ದರು. ಅಮ್ಮ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು. ನಂತರ ನನ್ನ ತಾಯಿ ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದನು. ಆಗ ನನ್ನ ತಂದೆ ನನ್ನ ತಾಯಿ ಮೇಲೆ ಅನುಮಾನಪಡಲು ಶುರು ಮಾಡಿದ್ದರು. ನನ್ನ ತಾಯಿ ವೀಝಿಂಗ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಮಲಗಲು ತುಂಬಾ ಕಷ್ಟಪಡುತ್ತಿದ್ದರು ಎಂದು ಹೇಳುತ್ತಾ ಭಾವುಕರಾದರು.

ಒಂದು ದಿನ ಅಪ್ಪ-ಅಮ್ಮನ ನಡುವೆ ಜಗಳವಾಗುತ್ತಿತ್ತು. ಶಬ್ದ ಕೇಳಿ ನಾನು ಒಳಗಡೆ ಹೋಗಿ ನೋಡಿದೆ. ಆಗ ನನ್ನ ತಂದೆ ತಾಯಿಯ ತಾಳಿ ಎಳೆಯುತ್ತಿದ್ದರು. ಇದಾದ ಬಳಿಕ ನನ್ನ ತಾಯಿ, ನನ್ನ ಜೊತೆ ಬರುತ್ತೀರಾ. ಈ ಮನೆಯಲ್ಲಿ ಇರುವುದು ಬೇಡ. ಬೇರೆ ಎಲ್ಲಿಯಾದರೂ ದೂರ ಹೋಗೋಣ ಎಂದರು. ಬಳಿಕ ಆ ರಾತ್ರಿಯೇ ನಾವು ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದೇವು. ಆ ಸಂದರ್ಭದಲ್ಲಿ ನಮ್ಮ ಬಳಿ ಹಣವಿರಲಿಲ್ಲ, ಕೇವಲ ಚಿನ್ನವಿತ್ತು. ಮನೆ ಬಿಟ್ಟು ಬಂದ ನಂತರ ನನ್ನ ತಂದೆಗೆ ಕರೆ ಮಾಡಿದಾಗ ನೀನು ಯಾರು ಎಂದು ಪ್ರಶ್ನಿಸಿದರು ಎಂದರು.

ನೀನು ಯಾರು ಎಂದು ನನ್ನ ತಂದೆ ಪ್ರಶ್ನಿಸಿದಾಗ ನಾವು ಮತ್ತೆ ಅವರನ್ನು ಕರೆ ಮಾಡಲು ಹೋಗಲಿಲ್ಲ. ಬಳಿಕ ದೊಡಮ್ಮನಿಗೆ ಕರೆ ಮಾಡಿದಾಗ ಅವರು ನಮಗೆ ಮಡಿಕೇರಿಗೆ ಕರೆದುಕೊಂಡು ಹೋದರು. ನನ್ನ ತಾಯಿಗೆ ವೀಝಿಂಗ್ ಇದ್ದ ಕಾರಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದುಕೊಂಡಿದೆ. ಆದರೆ ನನ್ನ ಬಳಿ ಹಣವಿರಲಿಲ್ಲ. ಹೀಗೆ ರಸ್ತೆಯಲ್ಲಿ ಹೋಗುವಾಗ ಕಾಲ್ಗೆಜ್ಜೆ ಬಿದ್ದಿತ್ತು. ಅದನ್ನು ಮಾರಿ ನನ್ನ ತಾಯಿಗೆ ಚಿಕಿತ್ಸೆ ಕೊಡಿಸಿದ್ದೇನೆ. ಇದುವರೆಗೂ ನನ್ನ ತಾಯಿಗೆ ಕೊರತೆ ಆಗದಂತೆ ನೋಡಿಕೊಂಡಿದ್ದೇನೆ ಎಂದು ರಶ್ಮಿ ಟಾಸ್ಕ್ ನಲ್ಲಿ ತಿಳಿಸಿದರು.

Comments

Leave a Reply

Your email address will not be published. Required fields are marked *