ಮದ್ಯದ ಮತ್ತಿನಲ್ಲಿ ಪಾತ್ರೆ ಹಿಡಿದು ಮನಬಂದಂತೆ ತಾಯಿಯನ್ನ ಹೊಡೆದ ಕ್ರೂರಿ ಮಗ

– ತಾಯಿಯನ್ನೇ ಕೊಲೆಗೈಲು ಯತ್ನಿಸಿದ ನಿರುದ್ಯೋಗಿ ಮಗ ಅರೆಸ್ಟ್

ಮುಂಬೈ: ಮದ್ಯದ ಮತ್ತಿನಲ್ಲಿ ತಾಯಿ ಹಾಗೂ ಪತ್ನಿಯನ್ನು ಕೊಲೆಗೈಲು ಯತ್ನಿಸಿದ್ದ ನಿರುದ್ಯೋಗಿ ಯುವಕನೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ದಿಂಡೋಶಿ ನಿವಾಸಿ ಆನಂದ್ ಲಾಲ್‍ಜಿ ವಿಶ್ವಕರ್ಮ ಹಲ್ಲೆ ಮಾಡಿದ ಆರೋಪಿ. ಘಟನೆಯ ಕುರಿತು ಆನಂದ್ ಸಹೋದರಿ ಅರ್ಚನಾ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಬಂದ ದಿಂಡೋಶಿ ಠಾಣಾ ಪೊಲೀಸರು ಆನಂದ್‍ನನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?:
ಆನಂದ್ ಉದ್ಯೋಗವಿಲ್ಲದೆ ತಿರುಗಾಡುತ್ತಿದ್ದ. ಈ ನಡುವೆ ಮದ್ಯ ಸೇವನೆಯನ್ನು ಬೆಳೆಸಿಕೊಂಡಿದ್ದ. ಮದ್ಯದ ಮತ್ತಿನಲ್ಲಿ ತಾಯಿ ಸರಸ್ವತಿ ಹಾಗೂ ಪತ್ನಿ ಪ್ರಿಯಾಂಕಾ ಜೊತೆಗೆ ಜಗಳವಾಡುತ್ತಿದ್ದ. ಎಂದಿನಂತೆ ಮದ್ಯ ಸೇವನೆ ಮಾಡಿದ್ದ ಆನಂದ್ ಮಂಗಳವಾರ ಮನೆಗೆ ಬಂದಿದ್ದ. ಇದನ್ನು ವಿರೋಧಿಸಿದ ಪತ್ನಿ ಪ್ರಿಯಾಂಕ ನೀನು ಮದ್ಯಪಾನ ಮುಂದುವರಿಸಿದರೆ ನಾನು ಕೂಡ ಕುಡಿಯಲು ಆರಂಭಿಸುತ್ತೇನೆ ಎಂದಿದ್ದಾಳೆ. ಇದರಿಂದ ಕೋಪಗೊಂಡ ಆನಂದ್ ಪತ್ನಿಯ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ.

ಸೊಸೆಯನ್ನು ಬೆಂಬಲಿಸಿ ಸರಸ್ವತಿ ಮಗನಿಗೆ ಬುದ್ಧಿ ಹೇಳಲು ಮುಂದಾಗಿದ್ದಾಳೆ. ಈ ವೇಳೆ ಕೋಪಗೊಂಡ ಆನಂದ್ ಮದ್ಯದ ಮತ್ತಿನಲ್ಲಿ ಕೈಗೆ ಸಿಕ್ಕ ಪಾತ್ರೆಗಳನ್ನು ಎತ್ತಿಕೊಂಡು ಇಬ್ಬರ ಮೇಲೂ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಆತನಿಂದ ತಪ್ಪಿಸಿಕೊಂಡ ಪ್ರಿಯಾಂಕಾ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ತಪ್ಪಿಸಿಕೊಂಡಿದ್ದಾಳೆ.

ಏಕಾಂಗಿಯಾಗಿ ಕೈಗೆ ಸಿಕ್ಕ ವೃದ್ಧ ತಾಯಿಯನ್ನು ಆನಂದ್ ಮನಬಂದಂತೆ ಥಳಿಸಿದ್ದಾನೆ. ಪರಿಣಾಮ ಸರಸ್ವತಿ ಅಸ್ವಸ್ಥಗೊಂಡು ಬಿದ್ದಿದ್ದಾಳೆ. ಈ ಘಟನೆಯಿಂದ ಗಾಬರಿಗೊಂಡ ಅರ್ಚನಾ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆನಂದ್‍ನನ್ನು ಬಂಧಿಸಿದ್ದಾರೆ.

ವೃದ್ಧೆ ಸರಸ್ವತಿ ಪರಿಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆಯ ವೇಳೆ ಪ್ರಿಯಾಂಕಾಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಆರೋಪಿ ಆನಂದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *