ಬಹುಕೋಟಿ ವಂಚನೆ ಪ್ರಕರಣ – ಬಳ್ಳಾರಿ ಕೋರ್ಟಿಗೆ ದಿಶಾ ಚೌಧರಿ ಹಾಜರು

– ನಾ ಎಲ್ಲರ ಹಣ ವಾಪಸ್ ಕೊಡುವೆ ಎಂದ ದಿಶಾ

ಬಳ್ಳಾರಿ: ಡ್ರೀಮ್ ಇನ್ಪ್ರಾ ಇಂಡಿಯಾ ಲಿಮಿಟೆಡ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಆರೋಪಿ ದಿಶಾ ಚೌಧರಿಯನ್ನು ಬಳ್ಳಾರಿ ಜೆಎಂಎಫ್‍ಸಿ ಕೋರ್ಟಿನಲ್ಲಿ ಇಂದು ಹಾಜರು ಪಡಿಸಲಾಗಿತ್ತು.

ಡ್ರೀಮ್ ಇನ್ಪ್ರಾ ಇಂಡಿಯಾ ಲಿಮಿಟೆಡ್ ಕಂಪನಿ ಹೆಸರಲ್ಲಿ ಹಲವು ಜನರಿಗೆ ವಂಚನೆ ಮಾಡಿದ ದಿಶಾ ಸದ್ಯ ಸಿಐಡಿ ವಶದಲ್ಲಿದ್ದಾರೆ. ಇದೀಗ ದಿಶಾ ವಂಚನೆ ಪ್ರಕರಣ ಬಳ್ಳಾರಿವರೆಗೂ ಹಬ್ಬಿದ್ದು, ಬಳ್ಳಾರಿಯ ಪ್ರಖ್ಯಾತ ವೈದ್ಯರಾದ ಡಾ.ಟಿ.ಸುರೇಶ್ ಅವರಿಗೂ 12 ಲಕ್ಷ ರೂ. ವಂಚನೆ ಮಾಡಿದ್ದರು. ವಂಚನೆ ಸಂಬಂಧಿಸಿದಂತೆ ವೈದ್ಯರು ಬಳ್ಳಾರಿಯಲ್ಲಿ ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ದಿಶಾ ಇಂದು ಕೋರ್ಟಿಗೆ ಹಾಜರಾಗಿದ್ದರು.

ಕೋರ್ಟಿಗೆ ಹಾಜರಾದ ಬಳಿಕ ಮಾತನಾಡಿದ ದಿಶಾ, ನಮ್ಮ ಕಂಪನಿ ನಷ್ಟ ಹೊಂದಲು ಸಚಿನ್ ನಾಯಕ್ ಎನ್ನುವವರು ಕಾರಣ. ಸದ್ಯ ಆತ ತಲೆ ಮರೆಸಿಕೊಂಡಿದ್ದಾನೆ. ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ ಆಗಿ ಜನರಿಗೆ ಹಣ ವಾಪಸ್ ನೀಡುವುದು ನನ್ನ ಕರ್ತವ್ಯ. ಎಲ್ಲರಿಗೂ ಹಣ ವಾಪಸ್ ಕೊಡುತ್ತೇನೆ. ಈಗ ನಾನು ಒಬ್ಬಂಟಿಯಾಗಿದ್ದೇನೆ. ನನ್ನ ಜೊತೆ ದೇವರಿದ್ದಾನೆ ಎಂದರು. ಸಿನಿಮಾ, ರಿಯಲ್ ಎಸ್ಟೇಟ್ ವ್ಯವಹಾರ ಸೇರಿದಂತೆ ಹಲವು ಕಡೆಗಳಲ್ಲಿ ಹೂಡಿಕೆ ಮಾಡುವುದಾಗಿ ದಿಶಾ ಸೇರಿದಂತೆ ಅವರ ತಂಡ ಹಲವು ಕಡೆಗಳಲ್ಲಿ ಸಾವಿರಾರು ಕೋಟಿ ರೂ. ಹಣವನ್ನು ವಸೂಲಿ ಮಾಡಿ ವಂಚನೆ ಮಾಡಿದ್ದಾರೆ ಎಂಬ ಆರೋಪವಿದೆ.

ಪ್ರಕರಣದಲ್ಲಿ ಮೊದಲು ಜಾಮೀನು ಪಡೆದುಕೊಂಡಿದ್ದ ದಿಶಾ ಆ ಬಳಿಕ ತಲೆಮರೆಸಿಕೊಂಡಿದ್ದರು. ಕೊನೆಗೂ ದಿಶಾರನ್ನು ಸಿಐಡಿ ಅಪರಾಧ ವಿಭಾಗ ತಂಡ ಮುಂಬೈನಲ್ಲಿ ಬಂಧನ ಮಾಡಿತ್ತು. ಕಡಿಮೆ ಬೆಲೆಯಲ್ಲಿ ನಿವೇಶನ, ಫ್ಲ್ಯಾಟ್ ನೀಡುವುದಾಗಿ ನಂಬಿಸಿ ಕೋಟ್ಯಾಂತರ ರೂ. ವಂಚಿಸಿದ ಆರೋಪ ಕಂಪನಿ ಮೇಲಿದೆ. 2017 ರಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದಂತೆ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಕಂಪೆನಿ ವಿರುದ್ಧ 60 ಪ್ರಕರಣಗಳು ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳಾದ ದಿಶಾ ಚೌಧರಿ ಸೇರಿದಂತೆ ಸಚಿನ್ ನಾಯಕ್, ಮನದೀಪ್ ಕೌರ್ ಹಾಗೂ 8 ಮಂದಿ ವಿರುದ್ಧ ಸಿಐಡಿ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು.

Comments

Leave a Reply

Your email address will not be published. Required fields are marked *