ಸೀಕ್ರೆಟ್ ರಿಪೋರ್ಟ್ ನೀಡಿದ ಪರಮೇಶ್ವರ್

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸೀಕ್ರೆಟ್ ರಿಪೋರ್ಟ್ ಒಂದನ್ನ ಮಾಜಿ ಡಿಸಿಎಂ ಜಿ.ಪರಮೇಶ್ವರ್ ನೀಡಿದ್ದಾರೆ. ಹಿರಿಯ ನಾಯಕರ ಸಭೆಯಲ್ಲಿ ಯಾವ ಸ್ಥಾನಗಳಿಗೆ ಯಾವ ನಾಯಕರು ಇಚ್ಛೆ ವ್ಯಕ್ತಪಡಿಸಿದ್ದಾರೆ. ಯಾರ ಯಾರ ಮನಸ್ಸಲ್ಲಿ ಏನೇನು ಆಸೆ ಇದೆ ಎಂಬ ಸೀಕ್ರೆಟ್ ರಿಪೋರ್ಟ್ ಸೋನಿಯಾ ಗಾಂಧಿಯವರಿಗೆ ತಲುಪಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಪಕ್ಷ ನಾಯಕನ ಸ್ಥಾನದಲ್ಲಿ ಮುಂದುವರಿಯುವ ಇಚ್ಛೆಯನ್ನ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಇತ್ತ ಹಿರಿಯ ಶಾಸಕ ಹೆಚ್.ಕೆ.ಪಾಟೀಲ್ ಸಹ ವಿಪಕ್ಷ ನಾಯಕನ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಸಿದ್ದರಾಮಯ್ಯ ವಿಪಕ್ಷದ ಜೊತೆಗೆ ಸಿಎಲ್ ಪಿ ನಾಯಕ ಸ್ಥಾನವು ನನಗಿರಲಿ ಎನ್ನುತ್ತಿದ್ದಾರಂತೆ. ತಮಗೆ ತಪ್ಪಿದರೆ ರಮೇಶ್ ಕುಮಾರ್ ರನ್ನ ಸಿಎಲ್ ಪಿ ನಾಯಕ ಮಾಡಲಿ ಅನ್ನೋದು ಸಿದ್ದರಾಮಯ್ಯರ ಪ್ಲಾನ್. ಆದರೆ ಸ್ವತಃ ಪರಮೇಶ್ವರ್ ಹಾಗೂ ಹೆಚ್.ಕೆ.ಪಾಟೀಲ್ ಸಿಎಲ್ ಪಿ ನಾಯಕನ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಮಟ್ಟದಲ್ಲಿ ಯಾವುದೇ ಅವಕಾಶ ಸಿಗದಿದ್ದರೆ ಸಿಡಬ್ಲುಸಿ ಸದಸ್ಯತ್ವ ಕೊಟ್ಟು ಸಮಾಧಾನ ಪಡಿಸುವುದು ಕಾಂಗ್ರೆಸ್ ಸಂಪ್ರದಾಯವಾಗಿದೆ. ರಾಜ್ಯಮಟ್ಟದ ಯಾವುದೇ ಸ್ಥಾನಮಾನ ಸಿಗಿದಿದ್ದರೆ ಸಿಡಬ್ಲುಸಿಯಲ್ಲಾದರು ಸ್ಥಾನಮಾನ ಸಿಗಲಿ ಅನ್ನೋದು ಹೆಚ್.ಕೆ.ಪಾಟಿಲ್ ನಿರೀಕ್ಷೆ. ಇತ್ತ ಸಿದ್ದರಾಮಯ್ಯ ತಮ್ಮ ಆಪ್ತ ರಮೇಶ್ ಕುಮಾರ್ ಗೆ ಬೇರೆ ಅವಕಾಶ ಸಿಗದಿದ್ದರೆ ಸಿಡಬ್ಲುಸಿ ಸಿಗಲಿ ಅನ್ನೋ ಆಸೆಯಲ್ಲಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯಕ್ಕೆ ಬಂದರೆ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಡಾರ್ಕ್ ಹಾರ್ಸ್. ಅದು ಗೊತ್ತಿದ್ದರು ಕೃಷ್ಣ ಬೈರೇಗೌಡ, ಎಂ.ಬಿ.ಪಾಟೀಲ್ ಹಾಗೂ ಮುನಿಯಪ್ಪ ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಹೀಗೆ ಡೀಟೈಲ್ಡ್ ಸೀಕ್ರೆಟ್ ರಿಪೋರ್ಟ್ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೈಸೇರಿದೆ.

Comments

Leave a Reply

Your email address will not be published. Required fields are marked *