ಒಡತಿಯ ಜೀವ ಉಳಿಸಲು ಹೋಗಿ ಮೃತಪಟ್ಟ ಶ್ವಾನ

ಬೆಳಗಾವಿ: ನಾಯಿ ಎಂದರೆ ನೀಯತ್ತಿಗೆ ಹೆಸರುವಾಸಿ ಎನ್ನಲಾಗುತ್ತೆ. ಹಲವಾರು ಸಂದರ್ಭದಲ್ಲಿ ಈ ಮಾತನ್ನು ನಾಯಿಗಳು ಸಾಬೀತು ಮಾಡಿ ತೋರಿಸಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಜಿಲ್ಲೆಯ ಖಾನಾಪೂರ ತಾಲೂಕಿನ ರುಮನೆವಾಡಿ ಗ್ರಾಮದಲ್ಲಿ ನಾಯಿಯೊಂದು ತನ್ನ ಒಡತಿ ಜೀವ ಉಳಿಸಲು ಹೋಗಿ ಅವರೊಂದಿಗೆ ತಾನು ಸಾವನ್ನಪ್ಪಿದೆ.

ರುಮನೆವಾಡಿ ಗ್ರಾಮದ ನಿವಾಸಿ ಶಾಂತಾ ಮಾರುತಿ ಹಾಗೂ ಅವರ ಸಾಕು ನಾಯಿ ವಿದ್ಯುತ್ ಶಾಕ್‍ನಿಂದ ಸಾವನ್ನಪ್ಪಿದ್ದಾರೆ. ಗಾಳಿಗೆ ಹೊಲದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿತ್ತು, ಇದನ್ನು ಯಾರು ಗಮನಿಸಿರಲಿಲ್ಲ. ಇದೇ ಹೊತ್ತಿಗೆ ಶಾಂತಾ ಅವರು ಎಂದಿನಂತೆ ಇಂದು ಕೂಡ ಕೆಲಸಕ್ಕಾಗಿ ತಮ್ಮ ಹೊಲಕ್ಕೆ ಹೋಗುತ್ತಿದ್ದರು. ಅವರ ಜೊತೆ ಅವರು ಸಾಕಿದ್ದ ನಾಯಿ ಕೂಡ ತೆರಳಿತ್ತು. ಈ ವೇಳೆ ವಿದ್ಯುತ್ ತಂತಿ ಮೇಲೆ ಮಹಿಳೆ ಕಾಲಿಟ್ಟ ಪರಿಣಾಮ ಶಾಕ್ ಹೊಡೆದು ಸ್ಥಳದಲ್ಲೇ ಬಿದ್ದು ಒದ್ದಾಡುತ್ತಿದ್ದರು.

ಆಗ ಒಡತಿ ಒದ್ದಾಡುತ್ತಿರುವುದನ್ನು ನೋಡಿದ ನಾಯಿ ಅವರನ್ನು ರಕ್ಷಿಸಲು ಹೋಗಿದೆ. ಆಗ ಅದಕ್ಕೂ ಕೂಡ ವಿದ್ಯುತ್ ತಗುಲಿ ಶಾಕ್ ಹೊಡೆದಿದೆ. ಈ ಸಂದರ್ಭ ಸ್ಥಳದ ಸುತ್ತಮುತ್ತ ಯಾರು ಇರಲಿಲ್ಲ ಹೀಗಾಗಿ ಯಾರೂ ಕೂಡ ಮಹಿಳೆ ಹಾಗೂ ನಾಯಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಆದ್ದರಿಂದ ನಾಯಿ ಹಾಗೂ ಶಾಂತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಖಾನಾಪೂರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ದುರ್ಘಟನೆ ನಡೆದ ಕೆಲ ಸಮಯದ ಬಳಿಕ ಹೊಲದ ಅಕ್ಕಪಕ್ಕ ಓದ್ದಾಡುತ್ತಿದ್ದ ಜನರು ಮಹಿಳೆ ಹಾಗೂ ನಾಯಿಯನ್ನು ನೋಡಿ, ಮಹಿಳೆ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ.

Comments

Leave a Reply

Your email address will not be published. Required fields are marked *