ರಕ್ತ ಟೆಸ್ಟ್ ಮಾಡ್ತೀನೆಂದು ಸೂಜಿಯಲ್ಲಿ ಮುಖಕ್ಕೆ ಚುಚ್ಚುತ್ತಿದ್ದ ವೈದ್ಯ- ನಿಮ್ಹಾನ್ಸ್ ಗೆ ಕಳಿಸಬೇಕೆಂದು ವರದಿ ನೀಡಿ 6 ತಿಂಗಳಾದ್ರೂ ಇಲ್ಲ ಕ್ರಮ

ಚಿಕ್ಕಮಗಳೂರು: ಆಸ್ಪತ್ರೆಗೆ ಬಂದ ರೋಗಿಗಳಿಗೆಲ್ಲಾ ನಿಂಗೆ ಏಡ್ಸ್ ಇದೆ, ರಕ್ತ ಟೆಸ್ಟ್ ಮಾಡುತ್ತೀನಿ ಎಂದು ಸೂಜಿಯಲ್ಲಿ ಮುಖಕ್ಕೆ ಚುಚ್ಚಿ, ನರ್ಸ್‍ಗಳಿಗೆ ನಿನ್ನ ಗೌನ್ ಬಿಚ್ಚು ಟೆಸ್ಟ್ ಮಾಡುತ್ತೀನಿ ಎಂದು ಹೇಳುತ್ತಿದ್ದ ಸರ್ಕಾರಿ ವೈದ್ಯ ಸೈಕೋಸೀಸ್‍ಗೆ ಒಳಗಾಗಿರೋದು ದೃಢಪಟ್ಟಿದೆ.

ವೈದ್ಯನಿಗೆ ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇದ್ದು ಧಾರವಾಡ ಅಥವಾ ನಿಮ್ಹಾನ್ಸ್ ಗೆ ಕಳಿಸಬೇಕೆಂದು ಮಾನಸಿಕ ರೋಗ ತಜ್ಞರು ವರದಿ ನೀಡಿ ಆರು ತಿಂಗಳೇ ಕಳೆದಿದೆ. ಆದರೆ ತಾಲೂಕು ಹೆಲ್ತ್ ಆಫೀಸರ್ ಮಾತ್ರ ಇಂದಿಗೂ ಕ್ರಮ ಕೈಗೊಂಡಿಲ್ಲ. ಅವರಿಂದಲೇ ಟ್ರೀಟ್‍ಮೆಂಟ್ ಕೊಡಿಸುತ್ತಿದ್ದಾರೆ. ಇವರಿಂದ ಚಿಕಿತ್ಸೆ ಪಡೆಯುವ ರೋಗಿಗಳ ಸ್ಥಿತಿ ದೇವರೇ ಬಲ್ಲ.

ವೀರೇಶ್ ವೈ ನರೇಗಲ್ ಎಂ.ಬಿ.ಬಿಎಸ್. ಡಿ ಆರ್ಥೋ ಅಂಡ್ ಎಂ.ಎಸ್.ಆರ್ಥೋ ಓದಿದ್ದಾರೆ. 35 ವರ್ಷ ಸರ್ವೀಸ್ ಇರೋ ಇವರು ಕಳೆದ ಒಂದೂವರೆ ವರ್ಷದಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೀಲು ಮತ್ತು ಮೂಳೆ ತಜ್ಞರಾಗಿದ್ದಾರೆ. ಆರು ತಿಂಗಳ ಹಿಂದೆ ಆಸ್ಪತ್ರೆಗೆ ಬರೋ ರೋಗಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ರಾತ್ರಿ ಆಸ್ಪತ್ರೆಗೆ ಬರೋ ರೋಗಿಗಳಿಂದ ಒಂದೊಂದು ಬಾಟಲಿ ರಕ್ತ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದರು.

ಗಾಯಕ್ಕೆ ಹಾಕಿರೋ ಹೊಲಿಗೆಯನ್ನ ಬಿಚ್ಚಿ ಮತ್ತೆ ಹೊಲಿಗೆ ಹಾಕೋಕೆ ಮುಂದಾಗುತ್ತಿದ್ದರು. ಇವರ ವರ್ತನೆ ಕಂಡ ಸ್ಥಳೀಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಆಡಳಿತ ವೈದ್ಯಾಧಿಕಾರಿಗೆ ದೂರು ನೀಡಿದ್ದರು. ತಾಲೂಕು ವೈದ್ಯಾಧಿಕಾರಿ 20.09.2017ರಂದು ಜಿಲ್ಲೆಯ ಜಿಲ್ಲಾ ಮಾನಸಿಕ ರೋಗ ತಜ್ಞರಿಗೆ ವೀರೇಶ್‍ರನ್ನು ಪರೀಕ್ಷಿಸುವಂತೆ ಪತ್ರ ಬರೆದಿದ್ದರು. ಆ ಪತ್ರಕ್ಕೆ ಮಾನಸಿಕ ರೋಗ ತಜ್ಞರು ಕೊಟ್ಟ ಉತ್ತರ ವೀರೇಶ್ ಸೈಕೋಸೀಸ್‍ಗೆ ಒಳಗಾಗಿದ್ದಾರೆಂದು. ಆದರೆ ಆರು ತಿಂಗಳಿಂದ ತಾಲೂಕು ವೈದ್ಯಾಧಿಕಾರಿ ಇಂದಿಗೂ ಕ್ರಮ ಕೈಗೊಳ್ಳದಿರೋದು ಮಾತ್ರ ದುರಂತ.

ವೀರೇಶ್ ಒಬ್ಬೊಬ್ಬರೇ ನಗುತ್ತಿದ್ದರು. ಒಬ್ಬೊಬ್ಬರೇ ಮಾತನಾಡುತ್ತಿದ್ದರು. ಒಂದು ಪ್ರಶ್ನೆ ಕೇಳಿದರೆ ಮತ್ತೊಂದು ಉತ್ತರ ಹೇಳಿ ಎಲ್ಲರ ಮೇಲೂ ರೇಗಾಡುತ್ತಿದ್ದರು. ಇವರನ್ನ ಪರೀಕ್ಷಿಸಿದ ಚಿಕ್ಕಮಗಳೂರಿನ ಮಾನಸಿಕ ರೋಗ ತಜ್ಞ ಡಾ.ವಿನಯ್ ಕುಮಾರ್ ಇವರಿಗೆ ನಾನು ಏನು ಮಾಡುತ್ತಿದ್ದೇನೆ, ಏನು ಮಾತನಾಡ್ತಿದ್ದೇನೆಂದು ಅರಿವಿಲ್ಲ. ಇವರು ಚಿಕಿತ್ಸೆ ನೀಡಲು ಅಶಕ್ತರಾಗಿದ್ದಾರೆ. ಇವರು ಚಿಕಿತ್ಸೆ ನೀಡಿದರೆ ಎಂತಹ ಅಚಾತುರ್ಯ ಬೇಕಾದರು ಆಗಬಹುದು. ಕೂಡಲೇ ಇವರನ್ನ ಇವರ ಮನೆಯವರ ಸಹಕಾರದೊಂದಿಗೆ ಇವರು ಮೊದಲು ಚಿಕಿತ್ಸೆ ಪಡೆಯುತ್ತಿದ್ದ ಧಾರವಾಡ ಅಥವಾ ನಿಮ್ಹಾನ್ಸ್‍ಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ವರದಿ ನೀಡಿದ್ದಾರೆ.

ವೀರೇಶ್ ಎಲ್ಲರಂತೆಯೇ ಇರುತ್ತಾರೆ. ನೋಡೋದಕ್ಕೂ ನಾರ್ಮಲ್ ಇರುತ್ತಾರೆ. ನಾನು ಚೆನ್ನಾಗಿಯೇ ಇದ್ದೇನೆ ನನಗೇನು ಆಗಿಲ್ಲ ಎಂದು ಹೇಳುತ್ತಾರೆ. ಆದರೆ ಇವರು ಜವಾಬ್ದಾರಿಯುತ ಕೆಲಸ ಮಾಡಲು ಅಶಕ್ತರಾಗಿರುತ್ತಾರೆಂದು ವರದಿ ನೀಡಿದ್ದಾರೆ. ಆದರೆ ವರದಿ ನೀಡಿ ಆರು ತಿಂಗಳಾದರೂ ಕ್ರಮ ಕೈಗೊಳ್ಳದ ತಾಲೂಕು ಆಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *