ಚಿಕಿತ್ಸೆ ಕೊಡಿ ಎಂದಿದ್ದಕ್ಕೆ ಗಾಯಾಳುವಿಗೆ ಹೊಡೆಯುತ್ತೇನೆ ಎಂದ ತುಮಕೂರಿನ ಸರ್ಕಾರಿ ವೈದ್ಯ

ತುಮಕೂರು: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ನೀಡಿ ಪರಿಪರಿಯಾಗಿ ಮನವಿ ಮಾಡಿ ಕಣ್ಣೀರು ಹಾಕಿದ್ದಕ್ಕೆ ವೈದ್ಯ ದೌರ್ಜನ್ಯ ಎಸಗಿದ ಘಟನೆ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ತುಮಕೂರು ತಾಲೂಕಿನ ಕಲ್ಲಹಳ್ಳಿ ಗ್ರಾಮದ ನಿವಾಸಿಗಳಾದ ಕರಿಸಿದ್ದಯ್ಯ ಹಾಗೂ ಹೇಮರಾಜ್ ಎನ್ನುವರು ಊರ್ಡಿಗೆರೆ ಬಳಿ ಬೈಕ್ ಗಳ ಡಿಕ್ಕಿಯಲ್ಲಿ ಗಾಯಗೊಂಡಿದ್ದರು. ಚಿಕಿತ್ಸೆಗೆಂದು ತುಮಕೂರಿನ ಜಿಲ್ಲಾಸ್ಪತ್ರೆಗೆ ಭಾನುವಾರ ರಾತ್ರಿ ಕರೆತಂದಿದ್ದಾರೆ.ಆದರೆ ವೈದ್ಯ ಡಾ.ವಾಸೀಮ್ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಹೋಗುವಂತೆ ಹೇಳಿದ್ದಾರೆ.

ಮನೆಗೆ ಹೋಗದ ಸ್ಥಿತಿಯಲ್ಲಿ ಗಾಯಾಳು ಕರಿಸಿದ್ದಯ್ಯ ತನ್ನನ್ನು ಆಸ್ಪತ್ರೆಯಲ್ಲೇ ದಾಖಲಿಸಿಕೊಂಡು ಚಿಕಿತ್ಸೆ ಮುಂದುವರೆಸುವಂತೆ ಗೋಗರೆದು ಅಂಗಲಾಚಿ ಬೇಡಿದ್ದಾರೆ. ಆದರೂ ಸಹ ಜಿಲ್ಲಾಸ್ಪತ್ರೆಯ ವೈದ್ಯ ವಾಸೀಮ್ ದಾಖಲಿಸಿಕೊಳ್ಳದೆ ಕರಿಸಿದ್ದಯ್ಯ ಅವರನ್ನು ನಿಂದಿಸಿದ್ದಾರೆ. ಜೊತೆಗೆ ಆಸ್ಪತ್ರೆಗೆ ದಾಖಲಿಸಿಕೊಳ್ಳದೇ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ.

ವೈದ್ಯರಿಗೆ ಹಿಡಿಶಾಪ ಹಾಕಿದ ಗಾಯಾಳುಗಳು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯ ಮೊರೆಹೋಗಿದ್ದಾರೆ. ಗಾಯಗೊಂಡ ರೋಗಿಯ ಮೇಲೆಯೇ ಬಾಯಿಗೆ ಬಂದಂತೆ ಬೈದು ಹೊಡೆಯುತ್ತೇನೆ ಎಂದು ರೌಡಿಗಳ ರೀತಿ ವಾಸೀಮ್ ವರ್ತನೆ ಮಾಡಿದ್ದಾರೆ.

ಇದೇ ಆಸ್ಪತ್ರೆಯಲ್ಲಿ ಕಳೆದ ವಾರ ಚಿಕಿತ್ಸೆಗೆಂದು ಬಂದಿದ್ದ ಗರ್ಭಿಣಿ ಮತ್ತು ಆಕೆಯ ಪತಿಗೆ ವೈದ್ಯರು ಚಿಕಿತ್ಸೆ ನೀಡದೆ ನಿಂದಿಸಿದ ಘಟನೆ ನಡೆದಿತ್ತು. ಗರ್ಭಿಣಿ ಮಸ್ತಾಕ್ ಚಿಕಿತ್ಸೆಗೆ ಬಂದಾಗ ಅಂಬುಲೆನ್ಸ್ ಚಾಲಕ ರಘು ಮತ್ತು ವೈದ್ಯರು ಬಾಯಿಗೆ ಬಂದಂತೆ ಬೈದಿದ್ದರು ಎನ್ನಲಾಗಿದೆ.

 

Comments

Leave a Reply

Your email address will not be published. Required fields are marked *