ಜಾಮೀನು ಸಿಕ್ಕಿದ್ದಕ್ಕೆ ಹಾಸನಾಂಬೆಗೆ ಡಿಕೆಶಿ ಪತ್ನಿಯಿಂದ ಪೂಜೆ

– ತಾಯಿಗೆ ಪುತ್ರಿ ಐಶ್ವರ್ಯ ಸಾಥ್

ಹಾಸನ: ಮಾಜಿ ಸಚಿವ, ಪತಿ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಪತ್ನಿ ಉಷಾ ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ತಾಯಿಗೆ ಪುತ್ರಿ ಐಶ್ವರ್ಯ ಸಾಥ್ ನೀಡಿದ್ದಾರೆ.

ಹಾಸನಾಂಬೆ ದರ್ಶನದ ಭಾಗ್ಯ ಭಕ್ತರಿಗೆ ವರ್ಷಕ್ಕೊಮ್ಮೆ ಮಾತ್ರ ಇರುತ್ತದೆ. ಜಾರಿ ನಿರ್ದೇಶನಾಲಯದ ಬಲೆಯಲ್ಲಿ ಸಿಲುಕಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಹಾಸನಾಂಬೆಯ ಆಶೀರ್ವಾದ ಸಿಕ್ಕಿದೆ. ಅತ್ತ ಮಾಜಿ ಸಚಿವರು ದೆಹಲಿಯಿಂದ ರಾಜ್ಯಕ್ಕೆ ಬರುವುದು ಖಚಿತವಾಗುತ್ತಿದ್ದಂತೆ, ಇತ್ತ ಕುಟುಂಬಸ್ಥರು ಹಾಸನಾಂಬೆ ದರ್ಶನ ಪಡೆದಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಪತ್ನಿ ಉಷಾ ಮತ್ತು ಪುತ್ರಿ ಐಶ್ವರ್ಯ ಹಾಸನಾಂಬೆ ಸನ್ನಿಧಿಯಲ್ಲಿ ಕುಳಿತು ತಾಯಿಯ ದರ್ಶನ ಪಡೆದರು. ಈ ವೇಳೆ ಗರ್ಭಗುಡಿಯಲ್ಲಿ ಕುಳಿತು ಅರ್ಧ ಗಂಟೆ ಧ್ಯಾನ ಮಾಡಿದರು. ಡಿ.ಕೆ.ಶಿವಕುಮಾರ್ ಕುಟುಂಬಸ್ಥರಿಗೆ ಹಾಸನದ ವಿಧಾನ ಪರಿಷತ್ ಸದಸ್ಯ ಗೋಪಾಲ್ ಸ್ವಾಮಿ ಸಾಥ್ ನೀಡಿದರು.

ಕಳೆದ ಬಾರಿ ಹಾಸನಾಂಬೆ ದರ್ಶನಕ್ಕೆ ಸ್ವತಃ ಡಿ.ಕೆ.ಶಿಕುಮಾರ್ ಅವರು ಕುಟುಂಬಸ್ಥರೊಂದಿಗೆ ಬಂದು ದರ್ಶನ ಪಡೆದಿದ್ದರು. ಈ ವೇಳೆ ಪ್ರತಿ ವರ್ಷವೂ ಹಾಸನಾಂಬೆ ಸನ್ನಿಧಿಗೆ ಬಂದು ದರ್ಶನಕ್ಕೆ ಬರುವುದಾಗಿ ಹೇಳಿದ್ದರು. ಆದರೆ ಈ ಬಾರಿ ಡಿಕೆ ಶಿವಕುಮಾರ್ ಅವರಿಗೆ ದೇವಿಯ ದರ್ಶನ ಸಿಗದಿದ್ದರೂ ಕುಟುಂಬ ಸದಸ್ಯರು ಬಂದು ಹಾಸನಾಂಬೆ ದರ್ಶನ ಪಡೆದಿದ್ದಾರೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯದ ಬಲೆಗೆ ಬಿದ್ದು ತಿಹಾರ್ ಜೈಲು ಸೇರಿದ್ದರು. 48 ದಿನಗಳ ಕಾಲ ಜೈಲಿನಿದ್ದ ಮಾಜಿ ಸಚಿವರು ಬುಧವಾರ ರಾತ್ರಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

Comments

Leave a Reply

Your email address will not be published. Required fields are marked *