ಬಿಡದಿ ಆಶ್ರಮಕ್ಕೆ ಭೇಟಿ ನೀಡಿದ್ದು ಯಾಕೆ: ಡಿಕೆಶಿ ಹೇಳ್ತಾರೆ ಓದಿ

ರಾಮನಗರ: ಎಲ್ಲ ಮಠ, ಆಶ್ರಮಗಳಿಗೂ ಭೇಟಿ ನೀಡುತ್ತಿದ್ದೇವೆ. ಬಿಡದಿ ನಿತ್ಯಾನಂದರ ಆಶ್ರಮದಲ್ಲೂ ಮತದಾರರು ಇರುವ ಹಿನ್ನೆಲೆಯಲ್ಲಿ ಭೇಟಿ ನೀಡಿದ್ದೇನೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಬಳಿಕ ಬಿಡದಿ ಆಶ್ರಮಕ್ಕೆ ಬುಧವಾರ ಭೇಟಿ ನೀಡಿದ್ದು ಯಾಕೆ ಎಂದು ಕೇಳಿದ ಪ್ರಶ್ನೆಗೆ, ನಿತ್ಯಾನಂದರ ಆಶೀರ್ವಾದ ಪಡೆಯಲು ಭೇಟಿ ನೀಡಿದ್ದೆ. ನಾವು ಹೋಗಿ ಕೇಳಬೇಕಾದದ್ದು ನಮ್ಮ ಕರ್ತವ್ಯ. ನಿರ್ಲಕ್ಷ್ಯ ಮಾಡಿ 1, 2 ವೋಟಿನಿಂದ ಸೋತವರಿದ್ದಾರೆ ಎಂದು ಉತ್ತರಿಸಿದರು.

 

ಇಂದು ಬೆಳಗ್ಗೆ ಕನಕಪುರ ತಾಲೂಕಿನ ಕಬ್ಬಾಳುವಿನಲ್ಲಿರುವ ಕಬ್ಬಾಳಮ್ಮ ದೇವಿಗೆ, ಕನಕಪುರದ ಕೆಂಕೇರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಡಿಕೆ ಶಿವಕುಮಾರ್ ನಾಮಪತ್ರ ಸಲ್ಲಿಸಿದರು. ದೇವಾಲಯದಿಂದ ಬೃಹತ್ ರ್ಯಾಲಿ ಮೂಲಕ ಸಾವಿರಾರು ಬೆಂಬಲಿಗರೊಡನೆ ತಾಲೂಕು ಕಚೇರಿಗೆ ಆಗಮಿಸಿದ ಸಚಿವರು ಚುನಾವಣಾಧಿಕಾರಿ ಉಮೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಪತ್ನಿ ಉಷಾ, ತಾಯಿ ಗೌರಮ್ಮ, ತಮ್ಮ ಡಿ.ಕೆ.ಸುರೇಶ್ ಸಚಿವರ ಜೊತೆಗಿದ್ದರು.

ಸಾರ್ವಜನಿಕರಿಂದ ಸಂಗ್ರಹವಾಗಿದ್ದ ಹಣವನ್ನು ಡೆಪಾಸಿಟ್ ಮಾಡಿದ ಸಚಿವರು ಠೇವಣಿ ಡೆಪಾಸಿಟ್ ನಲ್ಲಿ ನಮ್ಮದೂ ಪಾಲಿರಲಿ ಎಂಬುದು ಕಾರ್ಯಕರ್ತರ ಆಶಯವಾಗಿದೆ. ನಾನು ಠೇವಣಿಯನ್ನು ವಸೂಲಿ ಮಾಡಲು ಹೋಗಿಲ್ಲ. ಠೇವಣಿ ಡೆಪಾಸಿಟ್‍ಗೆ ನಾವು ಭಾಗಿಯಾಗಬೇಕು ಎಂದು ಕೆಲವರು 50, 100, 200, 500 ರೂಪಾಯಿಗಳನ್ನು ನೀಡಿದ್ದಾರೆ. ಆ ಹಣವನ್ನು ಡೆಪಾಸಿಟ್ ಕಟ್ಟಿದ್ದೇನೆ. ಇದು ಮೊದಲಿನಿಂದಲೂ ನಡೆದು ಬಂದ ಪದ್ದತಿಯಾಗಿದೆ ಎಂದು ತಿಳಿಸಿದರು.

6 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು 7ನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದೇನೆ. ಕ್ಷೇತ್ರದ ಜನ ವಿಶ್ವಾಸವಿಟ್ಟು ಪ್ರೋತ್ಸಾಹಿಸಿದ್ದಾರೆ. ಪಕ್ಷಭೇದವಿಲ್ಲದೆ ಎಲ್ಲರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತೇನೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲೂ ಉತ್ತಮ ಪ್ರತಿಕ್ರಿಯೆಯಿದೆ. ಸುಮ್ಮನೆ ಬಂಡೆಗೆ ತಲೆ ಹೊಡೆದುಕೊಳ್ಳಬೇಡಿ. ನಿಮ್ಮ ಸೇವೆಗೆ ಸದಾ ಸಿದ್ದರಿದ್ದೇವೆ, ಬನ್ನಿ ನಮ್ಮ ಜೊತೆ ಕೈ ಜೋಡಿಸಿ ರಾಜ್ಯದ ಜನರ ಸೇವೆ ಮಾಡಲು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರುವಂತೆ ಜನರಲ್ಲಿ ಮನವಿ ಮಾಡಿದರು.

Comments

Leave a Reply

Your email address will not be published. Required fields are marked *