ಸೈನಿಕನಿಗೆ ಎದುರಾಯ್ತು ಟ್ರಬಲ್ ಶೂಟರ್‌ರಿಂದ ಟ್ರಬಲ್

ಬೆಂಗಳೂರು: ಸೈನಿಕ ಯೋಗೇಶ್ವರ್ ಹಾಗೂ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ನಡುವಿನ ಫೈಟ್ ಈಗ ಕೋರ್ಟ್ ಮೆಟ್ಟಿಲೇರುವ ಹಂತಕ್ಕೆ ಹೋಗಿದೆ. ರಾಮನಗರ ಜಿಲ್ಲಾ ರಾಜಕಾರಣದ ಜಿದ್ದಾಜಿದ್ದಿ ಕೋರ್ಟ್ ನಲ್ಲಿ ಮುಖಾಮುಖಿಯಾಗುವಂತಾಗಿದೆ.

ಜನವರಿ 13 ರಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯೋಗೇಶ್ವರ್ ಹೇಳಿಕೆ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಲು ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ. ಯೋಗೇಶ್ವರ್ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದರು. ಈ ಸಂಬಂಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಜೊತೆ ಡಿಕೆಶಿ ಚರ್ಚೆ ಕೂಡ ನಡೆಸಿದ್ದರು. ಆದರೆ ಯೋಗೇಶ್ವರ್ ಸದನದ ಸದಸ್ಯರಲ್ಲದ ಕಾರಣ ಹಕ್ಕು ಚ್ಯುತಿ ಮಂಡನೆ ಬೇಡ ಮಾನನಷ್ಟ ಮೊಕದ್ದಮೆ ಹೂಡುವಂತೆ ರಮೇಶ್ ಕುಮಾರ್ ಸಲಹೆ ನೀಡಿದ್ದಾರೆ.

ಯೋಗೇಶ್ವರ್ ಹೇಳಿದ್ದು ಏನು?
ಕನಕಪುರದಲ್ಲಿ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ವಿರೋಧಿಸಿ ಜನವರಿ 13 ರಂದು ಬಿಜೆಪಿ ನಾಯಕರುಗಳು ಕನಕಪುರದಲ್ಲಿ ಪ್ರತಿಭಟನೆ ನಡೆಸಿದ್ದರು. ಆಗ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕನಕಪುರದಲ್ಲಿ ಡಿಕೆಶಿ ಸಹೋದರರು ನೂರಾರು ಕೊಲೆ ಮಾಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಈ ಹೇಳಿಕೆಯನ್ನೇ ಇಟ್ಟುಕೊಂಡು ಸಿ.ಪಿ.ಯೋಗೇಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಡಿಕೆಶಿ ಸಿದ್ಧತೆ ಮಾಡಿಕೊಂಡಿದ್ದಾರೆ. ಪಬ್ಲಿಕ್ ಟಿವಿಯ ಜೊತೆಗಿನ ಯೋಗೇಶ್ವರ್ ಸಂದರ್ಶನದ ವಿಡಿಯೋ ಆಧಾರವಾಗಿಟ್ಟುಕೊಂಡು ಮಾನ ನಷ್ಟ ಮೊಕದ್ದಮೆ ಹೂಡಲು ಡಿಕೆಶಿ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.

 

Comments

Leave a Reply

Your email address will not be published. Required fields are marked *