ಡಿಕೆಶಿ ಶೋ ಮಾಡೋದು ಬಿಟ್ಟು, ಕೆಲಸ ಮಾಡಿದ್ರೆ ಒಳ್ಳೇದು: ರಮೇಶ್ ಜಾರಕಿಹೊಳಿ

ಬಳ್ಳಾರಿ: ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಶೋ ಮಾಡುವುದನ್ನು ಬಿಟ್ಟು, ಕೆಲಸ ಮಾಡಿದರೇ ಒಳ್ಳೆಯದಾಗುತ್ತದೆ ಎಂದು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಟಾಂಗ್ ನೀಡಿದ್ದಾರೆ.

ಬೆಳಗಾವಿಯಲ್ಲಿ ಆರಂಭವಾದ ಸಚಿವ ಡಿಕೆ ಶಿವಕುಮಾರ ಹಾಗೂ ರಮೇಶ ಜಾರಕಿಹೊಳಿ ಜಟಾಪಟಿ ಬಳ್ಳಾರಿಯಲ್ಲೂ ಮುಂದುವರಿದಿದೆ. ಉಗ್ರಪ್ಪನವರ ಪರ ಕೂಡ್ಲಿಗೆಯಲ್ಲಿ ಪ್ರಚಾರದ ವೇಳೆ ಡಿಕೆ ಶಿವಕುಮಾರ ವಿರುದ್ಧ ಮತ್ತೆ ಜಾರಕಿಹೊಳಿ ಹರಿಹಾಯ್ದರು.

ಡಿಕೆಶಿ ಶೋ ಆಫ್ ಮಾಡೋದು ಬಿಟ್ಟು, ಕೆಲಸ ಮಾಡಿದರೆ ಒಳ್ಳೆಯದು. ನಾನು ಶಾಸಕ ನಾಗೇಂದ್ರ ಸಹೋದರನಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದು ನಿಜ. ಆದರೆ ಕೆಲವರ ಕುತಂತ್ರದಿಂದ ಟಿಕೆಟ್ ಕೈ ತಪ್ಪಿತು. ಉಗ್ರಪ್ಪನವರು ಸಹ ಪ್ರಾಮಾಣಿಕರಾಗಿದ್ದಾರೆಂದು ಹೇಳುವ ಮೂಲಕ ಡಿಕೆಶಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

ಸಚಿವ ಡಿಕೆ ಶಿವಕುಮಾರ್ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ಅಷ್ಟೇ. ಅವರಿಗೆ ಬಳ್ಳಾರಿ ಜಿಲ್ಲಾ ಚುನಾವಣಾ ಉಸ್ತುವಾರಿ ನೀಡಿಲ್ಲ. ಡಿಕೆಶಿಯ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಅವರ ವೈಯಕ್ತಿಕ ಹೇಳಿಕೆಯಾಗಿದೆ. ಅವರಿಗೆ ಈ ಬಗ್ಗೆ ಆಕ್ಷೇಪ ಇದ್ದಿದ್ದರೆ ಕ್ಯಾಬಿನೆಟ್ ಚರ್ಚೆ ವೇಳೆ ಹೇಳಬೇಕಿತ್ತು. ಈಗ ಈ ರೀತಿ ಬಹಿರಂಗ ಹೇಳಿಕೆ ನೀಡುವ ಅಗತ್ಯವೆನಿತ್ತು ಎಂದು ಪ್ರಶ್ನಿಸಿದರು.

ಡಿಕೆಶಿಯವರ ಹಿಂಬಾಲಕರಾದ ಲಕ್ಷ್ಮೀ ಹೆಬ್ಬಾಳಕರ್ ಪ್ರತ್ಯೇಕ ಧರ್ಮದ ಬಗ್ಗೆ ಮಾತನಾಡುವಾಗ ಅವರು ಎಲ್ಲಿಗೆ ಹೋಗಿದ್ದರು. ಪ್ರತಿ ಸಭೆಯಲ್ಲಿ ಮಾತನಾಡಿದಾಗ ಏಕೆ ತಡೆಯಲಿಲ್ಲ. ಕ್ಯಾಬಿನೆಟ್ ನಲ್ಲಿ ಈಶ್ವರ ಖಂಡ್ರೆ ಮತ್ತು ಎಸ್.ಎಸ್.ಮಲ್ಲಿಕಾರ್ಜುನ ಮಾತ್ರ ಪರ-ವಿರೋಧ ಚರ್ಚೆ ಮಾಡಿದ್ದರು. ಪ್ರತ್ಯೇಕ ಧರ್ಮ ಬೇಕು ಎಂದು ಹೇಳಿದ್ದಕ್ಕೆ ನಾವು ಪರಿಗಣಿಸಿದ್ದೇವೆ ಅಷ್ಟೇ ಎಂದು ಎಂಬಿ ಪಾಟೀಲ್ ಪರ ಬ್ಯಾಟ್ ಬೀಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *